ಕಸಾಪ ಹೊಸ ನಿಯಮ : ತಾಲ್ಲೂಕು ಕಸಾಪ ಅಧ್ಯಕ್ಷ ಗಿರಿ ಪುನರಾಯ್ಕೆಗೆ ಲಗಾಮು
ನಾಡೋಜ ಡಾ. ಮಹೇಶ್ ಜೋಷಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿ ಮೊದಲ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಹತ್ತರ ತೀರ್ಮಾನಗಳನ್ನು ಕೈಗೊಂಡಿದ್ದಾರೆ.
ತಾಲ್ಲೂಕು ಮತ್ತು ಜಿಲ್ಲಾ ಪದಾಧಿಕಾರಿಗಳನ್ನು ನೇಮಕ ಮಾಡುವ ಸಂದರ್ಭದಲ್ಲಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು. ಯಾವುದೆ ಕಾರಣಕ್ಕೂ ಈಗಾಗಲೇ ಅಧ್ಯಕ್ಷಗಿರಿ ಅನುಭವಿಸಿದವರಿಗೆ ಅವಕಾಶ ನೀಡಬಾರದು ಎಂಬ ಮಹತ್ತರ ತೀರ್ಮಾನ ಕೈಗೊಂಡಿದ್ದಾರೆ. ಇದರಿಂದ ತಾಲ್ಲೂಕು ಮತ್ತು ಜಿಲ್ಲಾ ಪದಾಧಿಕಾರಿಗಳನ್ನು ನೇಮಕ ಮಾಡುವ ಸಂಧರ್ಭದಲ್ಲಿ ಹೊಸ ಮುಖಗಳಿಗೆ ಅವಕಾಶ ದೊರೆಯಲಿದೆ.
ಈ ಹಿಂದೆ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದವರು, ತಾಲ್ಲೂಕು ಮತ್ತು ಜಿಲ್ಲಾ ಪದಾಧಿಕಾರಿಗಳನ್ನು ನೇಮಕ ಮಾಡಲು ಯಾವುದೆ ಕಡಿವಾಣ ಇರಲಿಲ್ಲ. ಇದರಿಂದಾಗಿ ಒಮ್ಮೆ ತಾಲೂಕು ಅಧ್ಯಕ್ಷ ಮತ್ತು ಪದಾಧಿಕಾರಿಗಳಾದವರನ್ನೆ ತಮ್ಮ ಸ್ವ ಹಿತಾಸಕ್ತಿಗಾಗಿ ಪುನರ್ ನೇಮಕ ಮಾಡಿಕೊಳ್ಳುತ್ತಿದ್ದರು.
ಆದರೆ ಇದೀಗ ಕೇಂದ್ರ ಕಸಾಪ ಹೊರಡಿಸಿರುವ ಹೊಸ ನಿಯಮದಲ್ಲಿ ಒಮ್ಮೆ ಅಧ್ಯಕ್ಷ ಅಥವಾ ಪದಾಧಿಕಾರಿಗಳಾದವರನ್ನು ಪುನರಾಯ್ಕೆ ಮಾಡಲು ಅವಕಾಶ ಇಲ್ಲ. ಇದರಿಂದಾಗಿ ಹೊಸ ಮುಖಗಳಿಗೆ ಅವಕಾಶಗಳು ತೆರೆದುಕೊಂಡಿವೆ.
