ಆಶಾ ಕಾರ್ಯಕರ್ತೆಯರಿಗೆ ತರಬೇತಿ ಕಾರ್ಯಾಗಾರ
ಕನಕಪುರ : ತಾಲೂಕಿನ ಹಾರೋಹಳ್ಳಿಯ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಮಕ್ಕಳ ರಕ್ಷಣ ಘಟಕದ ವತಿಯಿಂದ ಬಾಲ ನ್ಯಾಯ ಕಾಯ್ದೆ, ಪೊಕ್ಸೋ ಕಾಯ್ದೆ, ಬಾಲ್ಯವಿವಾಹ ಕಾಯ್ದೆ ಹಾಗೂ ದತ್ತು ಪ್ರಕ್ರಿಯೆ ಕುರಿತಂತೆ ಆಶಾ ಕಾರ್ಯಕರ್ತೆಯರಿಗೆ ಒಂದು ದಿನದ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಬಾಲನ್ಯಾಯ ಮಂಡಳಿ ಸದಸ್ಯ ಶಿವಲಿಂಗಯ್ಯ ಮಾತನಾಡಿ ಬಾಲ್ಯವಿವಾಹದಿಂದ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳನ್ನು ಮೊದಲು ಪೋಷಕರು ಅರಿಯಬೇಕು. ಚಿಕ್ಕ ವಯಸ್ಸಿಗೆ ಮದುವೆಯಾಗುವುದರಿಂದ ಗರ್ಭಿಣಿ ಸಮಯದಲ್ಲಿ ಅನೇಕ ದುಷ್ಪರಿಣಾಮಗಳು ಬೀರಲಿದ್ದು ತಾಯಿ ಮತ್ತು ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂದು ತಿಳಿಸಿದರು.
ಹಾಗಾಗಿ ಬಾಲ್ಯ ವಿವಾಹ ಮಾಡಬಾರದು ಬಾಲ್ಯ ವಿವಾಹ ನಡೆಯುತ್ತಿರುವುದು ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿಗೆ ಕೂಡಲೇ ಕರೆ ಮಾಡಿ ತಿಳಿಸಿ ಎಂದು ಮನವಿ ಮಾಡಿದರು. ಹಾಗೆಯೇ ಮಕ್ಕಳನ್ನು ದತ್ತು ಪಡೆಯುವವರು ಕೆ.ಎ.ಆರ್.ಎ ಎಂಬ ವೆಬ್ ಸೈಟ್ಗೆ ಭೇಟಿ ನೀಡಿ ನೋಂದಣಿ ಮಾಡಿಕೊಂಡು ಕಾನೂನಿನಡಿಯಲ್ಲಿ ಮಕ್ಕಳನ್ನು ದತ್ತು ಪಡೆಯಬಹುದೆಂದು ಸಲಹೆ ನೀಡಿದರು.
ಇನ್ನು ಪೋಷಕತ್ವ ಯೋಜನೆಯಡಿ ಅನಾಥ ಮಕ್ಕಳನ್ನು ಕುಟುಂಬದೊಡನೆ ಸಮ್ಮಿಲನ ಮಾಡಿಕೊಳ್ಳಬಹುದು ಎಂದರು. ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲರ ಹೊಣೆಯಾಗಿದ್ದು ಮಕ್ಕಳ ಹಕ್ಕುಗಳ ವಿರುಧ್ಧವಾಗಿ ಮಕ್ಕಳನ್ನು ಯಾರೂ ನಡೆಸಿಕೊಳ್ಳಬಾರದೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಡಾನ್ ಬಾಸ್ಕೊ ಸಂಸ್ಥೆಯ ಶಿವಮಲ್ಲು, ಮಕ್ಕಳ ರಕ್ಷಣಾಧಿಕಾರಿ ಸುಚಿತ್ರ, ಔಟ್ ರೀಚ್ ವರ್ಕರ್ ವೆಂಕಟೇಶ್, ಕಾನೂನು ಪರಿವೀಕ್ಷಣಾ ಅಧಿಕಾರಿ ಸವಿತಾ ಇನ್ನಿತರರು ಉಪಸ್ಥಿತರಿದ್ದರು.