ಬಾಲಕೃಷ್ಣ ತಮ್ಮ ಪತ್ನಿ ರಾಧಾ ಬಿ ಕೃಷ್ಣ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ : ಶಾಸಕ ಎ. ಮಂಜುನಾಥ್ ಆರೋಪ

ರಾಮನಗರ : ಮೇಡನಹಳ್ಳಿಯಲ್ಲಿ ಸರ್ಕಾರಿ ಜಮೀನು ಕಬಳಿಸಿರುವ ಬಾಲಕೃಷ್ಣ ತಮ್ಮ ಪತ್ನಿ ರಾಧಾ ಬಿ. ಕೃಷ್ಣ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ ಎಂದು ಶಾಸಕ ಎ. ಮಂಜುನಾಥ್ ಆರೋಪಿಸಿದರು.
ತಾಲ್ಲೂಕಿನ ಬಿಡದಿಯಲ್ಲಿ ಬುಧವಾರ ಬಿಡದಿ ಪುರಸಭೆ ಚುನಾವಣೆಯ ಅಂಗವಾಗಿ ‘ಬಿಡದಿ ಸಾಧನೆಯ ಹಾದಿಯಲ್ಲಿ’ ಕೈಪಿಡಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಮೈಕೋ ಸಂಸ್ಥೆ ವತಿಯಿಂದ 36 ಕೋಟಿ ರೂ. ಹಣ ಪಡೆದಿದ್ದಾರೆ. ಮೇಡನಹಳ್ಳಿ ಕರಿಯಪ್ಪ ಅವರನ್ನು ಬ್ಲಾಕ್ ಮೇಲ್ ಮಾಡುವ ಮೂಲಕ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಆಪಾದಿಸಿದರು.
ಮೇಡನಹಳ್ಳಿ, ಅವರಗೆರೆ, ಬಾನಂದೂರು, ಇಟ್ಟಮಡು ಭಾಗದಲ್ಲಿ ಸರ್ಕಾರಿ ಸರ್ವೆ ನಂಬರ್ ನಲ್ಲಿ ನಿವೇಶನ ಕೊಡುತ್ತೇವೆ. ಬಿಡದಿಯಲ್ಲಿ 13 ಕೋಟಿ ವೆಚ್ಚದಲ್ಲಿ ಆಸ್ಪತ್ರೆ, 80 ಲಕ್ಷ ವೆಚ್ಚದಲ್ಲಿ ಆಕ್ಸಿಜನ್ ಘಟಕ, ಮಂಚನಬೆಲೆಯಿಂದ ಬಿಡದಿಯ 23 ವಾರ್ಡ್‍ಗಳಿಗೆ ಕುಡಿಯುವ ನೀರು, ಯುಜಿಡಿ, ಗ್ಯಾಸ್ ಕೇಬಲ್ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.
ಸ್ಲಂ ಬೋರ್ಡ್‍ನಿಂದ 420 ಮನೆಗಳ ನಿರ್ಮಾಣಕ್ಕೆ ಸದ್ಯದಲ್ಲಿಯೆ ಚಾಲನೆ ನೀಡಲಾಗುವುದು. ಹೈವೇ ಕಾಮಗಾರಿಯಿಂದ ಮನೆ ಕಳೆದುಕೊಂಡವರಿಗೆ ಕೆಂಚನಕುಪ್ಪೆ ಸರ್ಕಾರಿ ಜಮೀನಿನಲ್ಲಿ ಆಶ್ರಯ ನಿವೇಶನ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಜನವರಿ 3 ರಂದು ಮಾಗಡಿಯಲ್ಲಿ ಜಿಟಿಡಿಸಿ ಕೇಂದ್ರಕ್ಕೆ ಮುಖ್ಯಮಂತ್ರಿ ಶಂಕು ಸ್ಥಾಪನೆ ಮಾಡಲಿದ್ದಾರೆ. ರಾಜ್ಯದಲ್ಲಿಯೇ ಬಿಡದಿಯನ್ನು ಮಾದರಿ ಪುರಸಭೆಯನ್ನಾಗಿ ಮಾಡಲಾಗುವುದು. ಪುಟ್ ಪಾತ್ ವ್ಯಾಪಾರಿಗಳಿಗೆ ಶಾಸಕರ ಅನುದಾನದಲ್ಲಿ ಸ್ಟೀಲ್ ಸ್ಟ್ರಚರ್ ನಿರ್ಮಾಣ ಮಾಡಿಕೊಡಲಾಗುತ್ತದೆ. ಸುಜುಕಿ ಕಾರ್ಖಾನೆ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, 6 ಸಾವಿರ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ನೀಡಲಾಗುವುದು ಎಂದು ತಿಳಿಸಿದರು.
ಹಲವು ವರ್ಷಗಳಿಂದ ನಿರಂತರವಾಗಿ ಜನಸೇವೆ ಮಾಡಿದ್ದೇನೆ. ನಿಮ್ಮ ಸೇವೆ ಇದ್ದರೆ ಜನರ ಮುಂದಿಡಿ ಎಂದು ಬಾಲಕೃಷ್ಣ ಅವರಿಗೆ ಸವಾಲು ಹಾಕಿದ ಅವರು ಬಿಡದಿ ಪಟ್ಟಣದಲ್ಲಿ ನಡೆದಿರುವ ಕೆಲಸಗಳ ಪೂರ್ಣ ಪ್ರಮಾಣದ ದಾಖಲೆಗಳನ್ನು ಪಾರದರ್ಶಕವಾಗಿ ಜನರ ಮುಂದಿಟ್ಟಿದ್ದೇನೆ. ಯುಜಿಡಿ ಸೇರಿದಂತೆ ಹಲವು ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ಮಾಡಿದ್ದೇನೆ ಎಂದರು.
ಕೆಎಚ್‍ಬಿ ಕಾಲೋನಿಯಲ್ಲಿ 85 ಲಕ್ಷ ರೂ ವೆಚ್ಚದಲ್ಲಿ ಕ್ರೀಡಾಂಗನ, ಬಾನಂದೂರು ಮತ್ತು ವೀರಾಪುರಕ್ಕೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ತಲಾ 25 ಕೋಟಿ ರೂ. ಬಿಡುಗಡೆಯಾಗಿದೆ. ಸತ್ಯಾಸತ್ಯತೆ ಬಾಲಕೃಷ್ಣ ಅವರ ಕಣ್ಣಿಗೆ ಕಾಣುತ್ತಿಲ್ಲವೆ. ಬಾಲಕೃಷ್ಣ ಅವರು ಶಾಸಕರಾಗಿದ್ದಾಗ ಕೊಟ್ಟ ಆಶ್ರಯ ನಿವೇಶನಗಳ ಅಕ್ರಮ ಇಂದು ಲೋಕಾಯುಕ್ತ ತನಿಖೆ ಆಗುತ್ತಿದೆ. ನಿಮ್ಮ ಕಾರು ಚಾಲಕರಿಗೆ, ಆಪ್ತ ಸಹಾಯಕರಿಗೆ (ಪಿಎ) ಆಶ್ರಯ ನಿವೇಶನ ಕೊಟ್ಟಿರುವುದು ಜಗತ್ ಜಾಹೀರಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ಎಚ್.ಎಲ್.ಚಂದ್ರು, ಮುಖಂಡರಾದ ಶೇಷಪ್ಪ, ಸೊಮೇಗೌಡ, ಲಕ್ಷ್ಮಿ ಮಂಜುನಾಥ್, ಹುಚ್ಚಮ್ಮನದೊಡ್ಡಿ ಲೊಕೇಶ್, ಪುರಸಭೆ ಅಭ್ಯರ್ಥಿಗಳಾದ ಭರತ್ ಕೆಂಪಣ್ಣ, ಮನು, ಮಂಜುಳಾ, ಕೆ.ಎನ್.ರಮೇಶ್, ಲಲಿತಾ ನರಸಿಂಹಯ್ಯ, ರವಿಕುಮಾರ್, ಸೋಮಶೇಖರ್, ದೇವರಾಜು, ಬಿ.ಜಿ.ಲೋಹಿತ್ ಕುಮಾರ್, ಆಯುಷ ಖಲೀಲ್, ಹರಿಪ್ರಸಾದ್, ರಾಕೇಶ್ ಪಿ.ಸ್ವಾಮಿ, ಬಿ.ಎಂ.ಪುಟ್ಟಮಾದಯ್ಯ ಪೆಟ್ರೊಲ್ ರಾಜು, ನಾಗರತ್ಮಮ್ಮ, ತೇಜಸ್ವಿನಿ, ವೈ.ಗಾಯಿತ್ರಿ, ರಾಮಕೃಷ್ಣಪ್ಪ, ಸರಸ್ವತಮ್ಮ, ಎಂ.ಜಿ.ರಮ್ಯ, ಎಲ್ಲಮ್ಮ, ಎನ್.ಶ್ರೀದರ್, ಭಾನುಪ್ರಯಾ, ಎಚ್.ಎನ್.ನಾಗರಾಜ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *