ಮದ್ಯಪಾನ ಚಟವಲ್ಲ, ಕಾಯಿಲೆ: ಮಹೇಶ್ ಕೆ.ಎಂ.
ಚನ್ನಪಟ್ಟಣ: ಮದ್ಯಪಾನ ಕೇವಲ ವೈಯಕ್ತಿಕ ಸಮಸ್ಯೆಯಲ್ಲ, ಇದೊಂದು ದೇಶದ ಸಮಸ್ಯೆಯಾಗಿದೆ. ಇಂದೂ ಶಾಲಾ ಹುಡುಗರಿಂದ ವಯೋವೃದ್ಧರವರೆಗೂ ಬಹುತೇಕ ಮಂದಿ ಕುಡಿತದ ದಾಸರಾಗಿದ್ದು ಕುಟುಂಬದ ಕಲಹದ ಜೊತೆಗೆ ಹಲ್ಲೆ ,ಕೊಲೆ, ಅತ್ಯಾಚಾರ ,ಕಳ್ಳತನ, ದರೋಡೆ, ಅಪಘಾತದಂತಹ ಸಮಾಜಘಾತಕ ಚಟುವಟಿಕೆಗಳಿಗೆ ಕುಡಿತದ ಅಮಲು ಕಾರಣವಾಗಿರುವುದನ್ನು ಗಮನಿಸಬಹುದು ಎಂದು ಮಹೇಶ್ ಕೆ.ಎಂ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ವತಿಯಿಂದ ಏರ್ಪಡಿಸಿದ್ದ, ಮದ್ಯಪಾನದಿಂದಾಗುವ ಸಾಮಾಜಿಕ ದುಷ್ಪರಿಣಾಮಗಳು ಎಂಬ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ, ಬೆಂಗಳೂರಿನ ಆಲ್ಕೋಹಾಲಿಕ್ ಅನಾನಿಮಸ್ ಸಂಸ್ಥೆಯ ಆಪ್ತ ಸಮಾಲೋಚಕರಾದ ಮಹೇಶ್ ಕೆ.ಎಂ ಆಗಮಿಸಿ, ಮದ್ಯಪಾನದಿಂದ ಸಮಾಜದ ಮೇಲಾಗುತ್ತಿರುವ ಪರಿಣಾಮವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಮದ್ಯಪಾನದಿಂದ ಅಬಕಾರಿ ಇಲಾಖೆಗೆ ದೊಡ್ಡ ಮೊತ್ತದ ಆದಾಯ ಸಂಗ್ರಹವಾಗುತ್ತದೆ ಎಂದು ನಂಬಲಾಗಿದೆ ,ಆದರೆ ಮದ್ಯಪಾನದಿಂದ ಉಂಟಾಗುವ ಸಮಸ್ಯೆಗಳಿಗೆ ಸರ್ಕಾರ ಇದಕ್ಕಿಂತಲೂ ಹೆಚ್ಚು ವೆಚ್ಚ ಮಾಡುತ್ತಿದೆ.
ಮದ್ಯಪಾನ ಚಟವಲ್ಲ, ಕಾಯಿಲೆ, ಎಂದು ತಿಳಿಸಿದರು .ರಕ್ತದೊತ್ತಡ, ಮಧುಮೇಹ, ಎಚ್ಐವಿ ಗಳಂತೆ ಇದು ಕೂಡ ಒಂದು ಗುಣಪಡಿಸಲಾಗದ ಕಾಯಿಲೆ. ಆದರೆ ಪರಿವರ್ತನೆ ಎಂಬ ಔಷಧಿಯಿಂದ ಕುಡಿತದ ಚಟದಿಂದ ಮುಕ್ತಿ ಹೊಂದಬಹುದೆಂದು ತಿಳಿಸಿದರು, ಇಂತಹ ಪರಿವರ್ತನೆ ಕಾರ್ಯಗಳನ್ನು ಆಲ್ಕೋಹಾಲಿಕ್ ಅನಾನಿಮಸ್ ಸಂಸ್ಥೆ ಆಯೋಜಿಸುವ ಸಭೆಗಳಲ್ಲಿ ನು ವ್ಯಸನದಿಂದ ಮುಕ್ತರಾಗಬಹುದು ಎಂದು ತಿಳಿಸಿದರು.
ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಜೆ.ನಾಗರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂದಿನ ದಿನಮಾನಗಳಲ್ಲಿ ಯುವಕರು ಯಥೇಚ್ಛವಾಗಿ ಮನಸು ಇಚ್ಚಿಸುವ ದಾಸ್ಯಗಳಿಗೆ ಒಳಗಾಗುತ್ತಿರುವುದು ಅಪಾಯಕರ ಸಂಗತಿ. ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರಾದ ನೀವುಗಳು ಇಂತಹ ದಾಸ್ಯಗಳಿಂದ ದೂರ ಇರುವಂತೆ ಯುವಜನಾಂಗವನ್ನು ಮತ್ತು ಸಮಾಜವನ್ನು ಸ್ವಲ್ಪಮಟ್ಟಿಗಾದರೂ ಬದಲಾಯಿಸುವ ಕಾರ್ಯದಲ್ಲಿ ನೆರವಾಗಬೇಕೆಂದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ವಿ ವೆಂಕಟೇಶ್ ಅಧ್ಯಕ್ಷತೆಯ ನುಡಿಯಲ್ಲಿ ಸಮಾಜ ಆರೋಗ್ಯವಂತ ಬದುಕನ್ನು ರೂಪಿಸಿಕೊಳ್ಳಬೇಕಾದರೆ ಮಧ್ಯಪಾನ, ಧೂಮಪಾನ, ತಂಬಾಕು ಪದಾರ್ಥಗಳು, ಜೂಜು ಇತ್ಯಾದಿ ದುಶ್ಚಟಗಳನ್ನು ಬಿಡಬೇಕಾದ ಅಗತ್ಯ ಇದೆ. ಮನಪರಿವರ್ತನೆಯೇ ಸಾಮಾಜಿಕ ಪರಿವರ್ತನೆಯಾಗಿ ರೂಪುಗೊಳ್ಳಲು ಸಾಧ್ಯವೆಂದರು. ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಮುರಳಿ ಕೂಡ್ಲೂರು ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿಕೊಟ್ಟರು ಮತ್ತು ಪ್ರಾಸ್ತಾವಿಕ ನುಡಿಯನ್ನು ರಾಘವೇಂದ್ರ ನಡೆಸಿಕೊಟ್ಟರು. ಸ್ವಯಂ ಸೇವಕರಾದ ರಾಜೇಶ್ ಮತ್ತು ಹರ್ಷಿತ ಕಾರ್ಯಕ್ರಮವನ್ನು ನಿರೂಪಿಸಿದರು. ಐಶ್ವರ್ಯ ಸ್ವಾಗತಿಸಿದರೆ, ಸಿಂಚನ ವಂದಿಸಿದರು ಕಾಲೇಜಿನ ಹಲವಾರು ಬೋಧಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
