ಚಿಕ್ಕೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಹಣ ದುರುಪಯೋಗ : ಮಾಜಿ ಕಾರ್ಯದರ್ಶಿಗೆ ಮೂರು ವರ್ಷ ಕಾರಾಗೃಹ ಶಿಕ್ಷೆ, 10 ಸಾವಿರ ದಂಡ
ಚನ್ನಪಟ್ಟಣ : ತಾಲೂಕಿನ ಚಿಕ್ಕೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಜೆಎಂಎಫ್ ಸಿ ನ್ಯಾಯಾಲಯ ಸಂಘದ ಮಾಜಿ ಕಾರ್ಯದರ್ಶಿಗೆ ಮೂರು ವರ್ಷ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಸಂಘದ ಮಾಜಿ ಕಾರ್ಯದರ್ಶಿ ರೇವಣ್ಣ ಶಿಕ್ಷೆಗೆ ಒಳಗಾಗಿರುವಾತ. ಈತನ ಮೇಲಿನ ಹಣ ದುರುಪಯೋಗ ಸಾಬೀತಾದ ಹಿನ್ನೆಲೆಯಲ್ಲಿ ಈ ತೀರ್ಪು ನೀಡಲಾಗಿದೆ.
ಪ್ರಕರಣದ ವಿವರ : ಸಂಘದ ಕಾರ್ಯದರ್ಶಿಯಾಗಿದ್ದ ರೇವಣ್ಣ ಮೇಲೆ 2009-09 ರ ಅವಧಿಯಲ್ಲಿ ಸಂಘದ 243 ಚೀಲ ಪಶು ಆಹಾರ, ಖನಿಜ ಮಿಶ್ರಣ ಹಾಗೂ ಇದೇ ಸಾಲಿನಲ್ಲಿ ಪ್ರಾರಂಭಿಕ ದಾಸ್ತಾನು, ಸಾಪ್ಟ್ ಕಿಟ್, ಸೆಮೆನ್ಸ್ ಸಿಲ್ಕು ಹಣ, ಮುಂಗಡ ಖರ್ಚು, ಮಾರಾಟ ಬಿಲ್ಲುಗಳ ಕೂಪನ್, ಸಂಘದ ಹಾಲು ಉತ್ಪಾದಕರಿಗೆ 1.30 ಲಕ್ಷ ರೂ ಹಣ ದುರುಪಯೋಗದ ಆರೋಪವಿತ್ತು. ಸಂಘದ ಲೆಕ್ಕಾ ಪರಿಶೋಧನಾ ಸಮಯದಲ್ಲಿ ಈ ಆರೋಪಕ್ಕೆ ಸಂಬಂಧಿಸಿದಂತೆ ಸದರಿ ದಾಖಲಾತಿಗಳನ್ನು ಹಾಜರುಪಡಿಸದೆ, ನಾಶಪಡಿಸಿರುವುದಾಗಿ ಈತನ ವಿರುದ್ಧ ಸಂಘದ ಸದಸ್ಯರೊಬ್ಬರು ದೂರು ಸಲ್ಲಿಸಿದರು. ತನಿಖೆ ವೇಳೆ ಈತನ ವಿರುದ್ಧದ ಆರೋಪಗಳು ದೃಢಪಟ್ಟ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ನಗರದ ಜೆಎಂಎಫ್ ಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದರು. ಇದೇ ವೇಳೆ ದೂರುದಾರರು ಈತನ ವಿರುದ್ಧ ಖಾಸಗಿ ದೂರೊಂದನ್ನು ಸಹ ದಾಖಲಿಸಿದ್ದು, ಸದರಿ ಪ್ರಕರಣವೂ ಸಹ ಈ ಪ್ರಕರಣದೊಂದಿಗೆ ಸೇರಿತ್ತು.
ಈ ಎಲ್ಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬುಧವಾರ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಹಿರಿಯ ಪ್ರಧಾನ ಸಿವಿಲ್ ನ್ಯಾಯಧೀಶರಾದ ಶುಭ, ಸಾಕ್ಷ್ಯಧಾರಗಳನ್ನು ಪರಮರ್ಶಿಸಿ ಆರೋಪ ದೃಢಪಟ್ಟ ಕಾರಣ ಸಂಘದ ಮಾಜಿ ಕಾರ್ಯದರ್ಶಿ ರೇವಣ್ಣಗೆ 3 ವರ್ಷ ಕಾರಾಗೃಹ ಶಿಕ್ಷೆ, 10 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಆರ್. ನಾಗರತ್ನ ವಾದಿಸಿದರು.