ರೈತ ಸಂಘಟನೆಗೆ ಸೇರುವ ಮೂಲಕ ಅನ್ಯಾಯದ ವಿರುದ್ಧ ಸಿಡಿದೇಳಿ : ಸಿ. ಪುಟ್ಟಸ್ವಾಮಿ
ಚನ್ನಪಟ್ಟಣ (hairamanagara.in) : ಹಸಿರುವ ಶಾಲು ಹಾಕಿಕೊಳ್ಳುವುದು ಎಂದರೆ ಅದೊಂದು ಜವಾಬ್ದಾರಿ, ಸಂಘಟನೆಗೆ ಬೇಕಾಗಿರುವುದು ಶಿಸ್ತು ಮತ್ತು ಪ್ರಾಮಾಣಿಕತೆ. ಅದಿಲ್ಲದಿದ್ದರೆ ಯಾವುದೇ ಸಂಘಟನೆ ಶಾಶ್ವತವಾಗಿ ಉಳಿದುಕೊಳ್ಳಲು ಸಾಧ್ಯವಿಲ್ಲ ಹಿರಿಯ ರೈತ ನಾಯಕ ಸಿ. ಪುಟ್ಟಸ್ವಾಮಿ ತಿಳಿಸಿದರು.
ತಾಲ್ಲೂಕಿನ ಕನ್ನಮಂಗಲ ಗ್ರಾಮದ ಹೊರವಲಯದಲ್ಲಿರುವ ಕಂತೆಸ್ವಾಮಿ ಮತ್ತು ಮಂಟೇಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ರೈತ ಸಂಘಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಿಮ್ಮಲ್ಲಿ ವಿಚಾರಗಳು ತುಂಬಿ ತುಳುಕುತ್ತಿವೆ. ಅದನ್ನು ಹೊರಗೆಡಹಲು ತವಕಿಸುತ್ತಿದ್ದೀರಿ. ನಿಮಗಾಗಿರುವ ಅನ್ಯಾಯದ ವಿರುದ್ಧ ಸಿಡಿದೇಳಲು ಇದೊಂದು ಸದಾವಕಾಶ. ಹಾಗಾಗಿ ನೀವು ರೈತ ಸಂಘಟನೆಗೆ ಸೇರುವ ಮೂಲಕ ನಿಮಗೆ ಮತ್ತು ನಿಮ್ಮ ಗ್ರಾಮಕ್ಕೆ
ಆಗುವ ಅನ್ಯಾಯದ ವಿರುದ್ಧ ಹೋರಾಡಲು ಅಸ್ತ್ರ ವಾಗಿದೆ ಎಂದು ತಿಳಿಸಿದರು.
ನಮ್ಮ ಶ್ರಮದ ಬದುಕನ್ನು ಬಂಡವಾಳಶಾಹಿ ಗಳು ಕೊಳ್ಳೆಹೊಡೆಯುತ್ತಿವೆ. ವಿವಿಧ ಸಂಘಟನೆಗಳು, ಪ್ರತಿಹಂತದ ರಾಜಕಾರಣಿಗಳು ಇಂದು ಹಸಿರು ಶಾಲು ಹಾಕ್ಕೊಂಡು ರಾಜಕಾರಣ ಮಾಡುತ್ತಾರೆ. ಹಸಿರು ರೈತ ಕುಲದ ಸಂಕೇತ. ಇದನ್ನು ಧರಿಸಿದ ವ್ಯಕ್ತಿ ನ್ಯಾಯಪರ ಇರಬೇಕು. ಆದರೆ ರಾಜಕಾರಣಿಗಳು ರೈತರ ಹೆಸರೇಳಿ, ಶಾಲು ಹಾಕಿಕೊಂಡು ರೈತರಿಗೆ ಕೊಡಲಿ ಪೆಟ್ಟು ನೀಡುತ್ತಿದ್ದಾನೆ. ನಮಗೆ ಬೇಕಾಗಿರುವುದು ವೈಜ್ಞಾನಿಕ ಬೆಲೆ, ಪ್ರಾಮಾಣಿಕತೆಯ ಅಧಿಕಾರಿಗಳು, ನೀರು, ವಿದ್ಯುತ್, ಇದನ್ನು ಕೊಡುವುದು ಸರ್ಕಾರದ ಕೆಲಸ, ಕೊಡದಿದ್ದರೂ ಪಡೆದುಕೊಳ್ಳುವುದು ನಮ್ಮ ಹಕ್ಕು. ಹಾಗಾಗಿ ಇಂದಿನ ಸಂಘಟನೆ ರೈತರ ಬದುಕಿಗೆ ಆಶಾದಾಯಕವಾಗಲಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಮಹಾತ್ಮ ಗಾಂಧಿ ಮತ್ತು ಡಾ ಬಿ ಆರ್ ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ಅಳವಡಿಸಿಕೊಂಡು, ಚಳವಳಿಯನ್ನು ಹಮ್ಮಿಕೊಳ್ಳೋಣಾ. ಅಹಿಂಸಾ ಮಾರ್ಗದಲ್ಲಿ ಸಂವಿಧಾನದ ಪ್ರಕಾರವೇ ರೈತ ಚಳವಳಿಯನ್ನು ಮುನ್ನಡೆಸಿ, ರೈತ ಸಂಕಷ್ಟವನ್ನು ದಪ್ಪ ಚರ್ಮದವರಿಗೆ ತಿಳಿಸುವ ಮೂಲಕ ಚಳವಳಿ ಹಮ್ಮಿಕೊಂಡು ಕಾರ್ಯಸಾಧನೆ ಮಾಡಲು ನಾವು ಮುನ್ನುಗ್ಗೋಣಾ ಎಂದು ಯುವಕರಿಗೆ ಕರೆ ನೀಡಿದರು.
ರೈತ ಸಂಘಟನೆ ಶರವೇಗದಲ್ಲಿ ಮುನ್ನುಗ್ಗುತ್ತಿದೆ : ಹೊಂಬಾಳೇಗೌಡ
ರೈತ ಸಂಘ ಎಂದರೆ ಮೂಗುಮುರಿಯುವ ಕಾಲ ಮುಗಿದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರೈತರಿಗೆ ಅನ್ಯಾಯವಾಗದಂತೆ ಎಚ್ಚರವಹಿಸುವ ಕಾಲ ಸನ್ನಿಹಿತವಾಗುತ್ತಿದೆ ಎಂದು ಹಿರಿಯ ರೈತ ಮುಖಂಡ ವಿಠಲೇನಹಳ್ಳಿ ಹೊಂಬಾಳೇಗೌಡ ತಿಳಿಸಿದರು.
80 ರ ದಶಕದ ರೈತ ಸಂಘಟನೆ ಮತ್ತೆ ಮರುಕಳಿಸುತ್ತಿದೆ. ಚನ್ನಪಟ್ಟಣ ತಾಲ್ಲೂಕು ಒಂದರಲ್ಲೇ ಈಗಾಗಲೇ ಸಮಾನ ಮನಸ್ಕರ ವೇದಿಕೆ ವತಿಯಿಂದ ನಲವತ್ತು ಗ್ರಾಮಗಳಲ್ಲಿ ಸಂಘಟನೆ ಚಿಗುರು ಹೊಡೆದಿದೆ. ಹಳೆಬೇರಿನ ಜೊತೆ ಹೊಸ ಚಿಗುರು ಸೇರಿದ್ದು ಸೊಬಗಿನ ಜೊತೆಗೆ ಬುಡ ಭದ್ರವಾಗುತ್ತಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರೈತರ ಕೆಲಸದ ಬಗ್ಗೆ ಆಸ್ಥೆವಹಿಸಲು ಕಾರಣಕರ್ತರಾಗುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಘಟನೆ ಆಗುವಂತೆ ನೀವುಗಳು ಮುಂದಡಿ ಇಡಬೇಕು ಎಂದು ತಿಳಿಸಿದರು.
ಹಿಂದಿನ ಮತ್ತು ಇಂದಿನ ರೈತ ಸಂಘಟನೆ, ನಡೆದುಬಂದ ದಾರಿ, ಆಗಬೇಕಿರುವ ಕೆಲಸಗಳ ಬಗ್ಗೆ ಹಿರಿಯ ರೈತ ಮುಖಂಡರಾದ ಪ್ರಕಾಶ್, ನಂಜಪ್ಪ, ಪ್ರಗತಿಪರ ರೈತರಾದ ಶಿವಕುಮಾರ್, ಮಹೇಶ್ ನಾಗೇಶ್, ಸಾಮಾಜಿಕ ಹೋರಾಟಗಾರ ಗೋ ರಾ ಶ್ರೀನಿವಾಸ, ರಾಂಪುರ ಧರಣೀಶ್, ರಾಂಪುರ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕನ್ನಮಂಗಲ ಯೋಗಿ, ಚಲುವೇಗೌಡ ರೈತ ಸಂಘಟನೆ ಬಗ್ಗೆ ಮಾತನಾಡಿದರು.
ಕನ್ನಮಂಗಲ ಮತ್ತು ಅಂಗರಹಳ್ಳಿ ಗ್ರಾಮಗಳ ನಲವತ್ತಕ್ಕೂ ಹೆಚ್ಚು ಮಂದಿ ಸಮಾನ ಮನಸ್ಕರ ರೈತ ಸಂಘಟನೆಗೆ ಹಸಿರು ಶಾಲು ಧರಿಸುವ ಮೂಲಕ ಸೇರ್ಪಡೆಗೊಂಡರು. ಸೇರ್ಪಡೆಗೊಂಡವರಿಗೆ ಸಿ. ಪುಟ್ಟಸ್ವಾಮಿ ರವರು ಪ್ರಮಾಣವಚನ ಬೋಧಿಸಿದರು.
ವರದಿ : ಗೋ.ರಾ. ಶ್ರೀನಿವಾಸ
ಮೊ: 9845856139