ಈಗಲ್ಟನ್ ವಿಲ್ಲಾ ಸಿ-21 ರಲ್ಲಿ ನಡೆದಿದ್ದ ರಘುರಾಜ್ ಹಾಗೂ ಆಶಾ ದಂಪತಿಯ ಭೀಕರ ಹತ್ಯೆ ಪ್ರಕರಣ : ಬಿಹಾರ ಮೂಲದ ಜೋಗಿಂದರ್ ಕುಮಾರ್ ಯಾದವ್ ಬಂದನ
ಹಾಯ್ ರಾಮನಗರ (hairamanagara.in) 09 ಫೆಬ್ರವರಿ 2022
ರಾಮನಗರ : ಈಗಲ್ಟನ್ ರೆಸಾರ್ಟ್ನ ವಿಲ್ಲಾದಲ್ಲಿ ನಡೆದಿದ್ದ ವೃದ್ಧ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ ಜೋಗಿಂದರ್ ಕುಮಾರ್ ಯಾದವ್ ಎಂಬಾತನನ್ನು ಬಿಡದಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಳೆದ 6 ತಿಂಗಳಿಂದ ವಿಲ್ಲಾದಲ್ಲಿ ಕೆಲಸ ಮಾಡಿಕೊಂಡಿದ್ದ ಜೋಗಿಂದರ್ ಕುಮಾರ್ ಯಾದವ್ ಸುತ್ತಿಗೆಯಿಂದ ಹೊಡೆದು ವಾಯುಸೇನೆಯ ನಿವೃತ್ತ ಪೈಲಟ್ ರಘುರಾಜನ್, ಅವರ ಪತ್ನಿ ಆಶಾ ಅವರನ್ನು ಹತ್ಯೆಗೈದಿದ್ದ. ಬಳಿಕ ರಘುರಾಜನ್ ಅಕೌಂಟ್ನಿಂದ ಹಣ ವರ್ಗಾಯಿಸಿಕೊಂಡು ಪರಾರಿಯಾಗಿದ್ದ. ಸದ್ಯ ಪೊಲೀಸರು ಆರೋಪಿ ಜೋಗಿಂದರ್ ಕುಮಾರ್ ಯಾದವನನ್ನು ಬಂದಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೋರ್ವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ತಮಿಳುನಾಡು ಮೂಲದ ರಘುರಾಜನ್, ಏರ್ ಪೋರ್ಸ್ ನಲ್ಲಿ ಪೈಲಟ್ ಆಗಿ ಕಾರ್ಯನಿರ್ವಹಿಸಿ ನಿವೃತ್ತಿ ನಂತರ ತಾಲ್ಲೂಕಿನ ಬಿಡದಿಯ ಈಗಲ್ಟನ್ ಹಾಗೂ ಗಾಲ್ಫ್ ವಿಲೇಜ್ ಆವರಣದಲ್ಲಿರುವ ಈಗಲ್ಟನ್ ವಿಲ್ಲಾ ಸಿ-21 ರಲ್ಲಿ ಐದು ವರ್ಷದಿಂದ ವಾಸವಿದ್ದರು. ಸೋಮವಾರ ರಾತ್ರಿ ದಂಪತಿಯನ್ನು ಸುತ್ತಿಗೆಯಿಂದ ಹೊಡೆದು ಆರೋಪಿ ಜೋಗಿಂದರ್ ಕುಮಾರ್ ಯಾದವ್ ಹತ್ಯೆ ಮಾಡಿದ್ದಾನೆ. ರಘುರಾಜ್, ಆಶಾ ದಂಪತಿಗೆ ಇಬ್ಬರು ಮಕ್ಕಳಿದ್ದು ದೆಹಲಿಯಲ್ಲಿ ವಾಸವಿದ್ದಾರೆ.

ಸೋಮವಾರ ತಡರಾತ್ರಿ ರಘುರಾಜ್ ಅವರಿಗೆ ಪುತ್ರ ಕರೆ ಮಾಡಿದಾಗ ಪೋನ್ ಕರೆ ಸ್ವೀಕರಿಸಿರಲಿಲ್ಲ. ನಂತರ ಜೋಗಿಂದರ್ ಕುಮಾರ್ ಯಾದವ್ ಗೆ ಕರೆ ಮಾಡಿದಾಗ ಆತ ಬೆಂಗಳೂರಿಗೆ ಹೋಗಿದ್ದಾರೆ ಎಂದು ತಿಳಿಸಿದ್ದಾನೆ. ಇದರಿಂದ ಸಂಶಯಗೊಂಡ ಪುತ್ರ ಮಂಗಳವಾರ ಮಧ್ಯಾಹ್ನ ವಿಲ್ಲಾಗೆ ಹೋಗಿ ಚೆಕ್ ಮಾಡುವಂತೆ ರೆಸಾರ್ಟ್ ನ ಸೆಕ್ಯೂರಿಟಿಗೆ ಹೇಳಿದ್ದಾರೆ. ಸೆಕ್ಯೂರಿಟಿ ವಿಲ್ಲಾ ಒಳಗೆ ಹೋಗಿ ನೋಡಿದಾಗ, ಮೊದಲ ಮಹಡಿಯಲ್ಲಿ ಪತಿ, ಕೆಳ ಮಹಡಿಯಲ್ಲಿ ಪತ್ನಿ ಕೊಲೆಯಾಗಿರುವುದು ಕಂಡುಬಂದಿದೆ. ಅದೇ ಹೊತ್ತಿಗೆ ಜೋಗಿಂದರ್ ಕುಮಾರ್ ಯಾದವ್ ಆತನ ಅಣ್ಣನ ಜತೆ ವಿಲ್ಲಾದ ಹಿಂಬಾಗಿಲಿನಿಂದ ಎಸ್ಕೇಪ್ ಆಗಿದ್ದಾನೆ. ಈಗ ಪೊಲೀಸರು ಆರೋಪಿಯನ್ನು ಬಂದಿಸಿದ್ದು ಮತ್ತೋರ್ವ ಆರೋಪಿಗಾಗಿ ಹುಡುಕಾಡುತ್ತಿದ್ದಾರೆ.