ಚನ್ನಪಟ್ಟಣ : ಸಂಭ್ರಮದ ಹೋಳಿ ಹಬ್ಬ ಆಚರಣೆ
ಚನ್ನಪಟ್ಟಣ : ನಗರದ ಮಂಡಿ ಪೇಟೆಯಲ್ಲಿ ಕಳೆದ 15 ದಿನಗಳಿಂದ ಪ್ರತಿಷ್ಠಾಪನೆ ಮಾಡಲಾಗಿದ್ದ ರತಿ ಮನ್ಮಥರ ಮೂರ್ತಿಯನ್ನು ಇಂದು ಗರುಡಗಂಬ ಬೀದಿ ವೃತ್ತದಿಂದ ಧೂಮ್ ಲೈಟ್ ಸರ್ಕಲ್ ನಿಂಬೆಹಣ್ಣು ಸರ್ಕಲ್ ಪೇಟೆ ಬೀದಿಯಲ್ಲಿ ಮೆರವಣಿಗೆ ಮಾಡಿ ಪೂಜೆ ಸಲ್ಲಿಸಲಾಯಿತು.

ಕಾಮಣ್ಣನ ಉತ್ಸವ ಸಮಿತಿ ವತಿಯಿಂದ ಆಯೋಜನೆ ಮಾಡಲಾಗಿದ್ದ ರತಿ ಮನ್ಮಥರ ಮೂರ್ತಿಗಳ ಮೆರವಣಿಗೆಯಲ್ಲಿ ಬಣ್ಣದೋಕುಳಿ ಹಾಡುವ ಮೂಲಕ ತಮಟೆ ನಾದಕ್ಕೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಯುವಕರು ನೃತ್ಯ ಮಾಡಿ ಸಂಭ್ರಮಿಸಿದರು. ಪರಸ್ಪರ ಒಬ್ಬರಿಗೊಬ್ಬರು ಬಣ್ಣ ಹಚ್ಚಿಕೊಳ್ಳುವ ಮೂಲಕ ನೆರೆದಿದ್ದ ನೂರಾರು ಸಂಖ್ಯೆಯ ಜನರು ಹೋಳಿ ಹಬ್ಬ ಆಚರಣೆ ಮಾಡಿದರು.
ಬೆಳ್ಳಿ ರಥದಲ್ಲಿ ರತಿ-ಮನ್ಮಥ ರನ್ನು ಮೆರವಣಿಗೆ ಮಾಡುವ ಮೂಲಕ ಹೋಳಿ ಹಬ್ಬಕ್ಕೆ ಚಾಲನೆ ನೀಡಲಾಯಿತು.
ಕಾಮಣ್ಣನ ಉತ್ಸವ ಸಮಿತಿ ವತಿಯಿಂದ ರತಿ ಮನ್ಮಥರ ರೀತಿ ಮಕ್ಕಳಿಗೆ ಅಲಂಕಾರ ಮಾಡಿ ಬೆಳ್ಳಿರಥದಲಿ ಕೂರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಜೊತೆಗೆ ಜಂಬೂ ಸವಾರಿಯನ್ನು ಆಯೋಜನೆ ಮಾಡಲಾಗಿತ್ತು.
ರತಿ ಮನ್ಮಥನ ರೀತಿ ಮಕ್ಕಳಿಗೆ ಅಲಂಕಾರ ಮಾಡಿ ಮೆರವಣಿಗೆ ಮಾಡುತ್ತಿರುವುದು ನೆರೆದಿದ್ದ ಜನರ ಕಣ್ಮನ ಸೆಳೆಯುವಂತಿತ್ತು.
ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಬಮೂಲ್ ಮಾಜಿ ನಿರ್ದೇಶಕ ಎಸ್. ಲಿಂಗೇಶ್ ಕುಮಾರ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಜರಿದ್ದರು.
ಕಳೆದ 2 ವರ್ಷಗಳಿಂದ ಕೋವಿಡ್ ನಿರ್ಬಂಧದಿಂದಾಗಿ ಇಲ್ಲಿನ ಹೊಳಿ ಹಬ್ಬಕ್ಕೆ ಬ್ರೇಕ್ ಬಿದ್ದಿತ್ತು. ಆದರೆ, ಈಗ ಸಾಮಾನ್ಯ ದಿನಗಳು ಮರಳುತ್ತಿದ್ದು ಕೋವಿಡ್ ಸಂಖ್ಯೆಯಲ್ಲಿ ಅಪಾರ ಇಳಿಮುಖವಾಗಿರುವುದರಿಂದ ಹಬ್ಬದ ಸಂಭ್ರಮಕ್ಕೆ ಕಳೆ ಬಂದಿತ್ತು.