ತಾನಿನಾ ರಂಗದಂಗಳದಲ್ಲಿ ರಾವಣಾಸುರ ಯುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ : “ಯಥಾ ಪ್ರಕಾರ” ನಾಟಕ ಪ್ರದರ್ಶನ
ರಾಮನಗರ : ಯುವ ಸಮುದಾಯ ರಂಗಭೂಮಿ ಕ್ಷೇತ್ರದ ಬಗ್ಗೆ ಆಸಕ್ತಿ ತೋರದೆ ಇರುವುದರಿಂದ ರಂಗಭೂಮಿಯ ನಾಟಕಗಳು ಮತ್ತು ಕಲೆಗಳು ಬೇಡಿಕೆ ಕಳೆದುಕೊಳ್ಳುತ್ತಿವೆ ಎಂದು ಸಾಹಿತಿ ಸಿ. ಮಾರಣ್ಣ ತಿಳಿಸಿದರು.

ತಾಲ್ಲೂಕಿನ ಕೈಲಾಂಚ ಹೋಬಳಿಯ ಕೃಷ್ಣಾಪುರದೊಡ್ಡಿಯ ತಾನಿನಾ ರಂಗದಂಗಳದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಕರ್ನಾಟಕ ನಾಟಕ ಅಕಾಡೆಮಿಯ ಸಹಕಾರದಲ್ಲಿ ರಾವಣಾಸುರ ಯುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಮ್ಮಿಕೊಂಡಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ಸಮುದಾಯ ರಂಗಭೂಮಿ ಕ್ಷೇತ್ರದ ಬಗ್ಗೆ ಆಸಕ್ತಿ ತೋರಿದರೆ ಮಾತ್ರ ರಂಗಭೂಮಿ ಕ್ಷೇತ್ರ ಮುಂದಿನ ತಲೆಮಾರಿಗೆ ಉಳಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ರಂಗ ನಿರ್ದೇಶಕ ಎಸ್. ಪ್ರದೀಪ್ ಮಾತನಾಡಿ ರಾಮನಗರದಲ್ಲಿ ಹೆಚ್ಚು ಕಲಾವಿದರಿದ್ದಾರೆ. ಎಲ್ಲಾ ರೀತಿಯ ಕಲಾವಿದರು ಇದ್ದಾರೆ. ಆದರೆ ಪೌರಾಣಿಕ ನಾಟಕಗಳಿಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಸಾಮಾಜಿಕ ನಾಟಕಗಳ ಬಗ್ಗೆ ಸಹ ಕಾಳಜಿ ಇರಲಿ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬೀಷ್ಮರಾಮಯ್ಯ ಅವರು ರಚಿಸಿ ನಿರ್ದೇಶಿಸಿರುವ “ಯಥಾಪ್ರಕಾರ” ನಾಟಕವನ್ನು ಸಮುದಾಯ ತಂಡದವರು ಪ್ರದರ್ಶಿಸಿದರು. ಭಾಗ್ಯಮ್ಮ ಮತ್ತು ತಂಡದವರು ರಂಗಗೀತೆ, ಅರ್ಚನ ಮತ್ತು ತಂಡದವರು ಜನಪದ ಗೀತೆಗಳ ಗಾಯನವನ್ನು ನಡೆಸಿಕೊಟ್ಟರು.
ಶಾಂತಲಾ ಚಾರಿಟಬಲ್ ಟ್ರಸ್ಟಿನ ಸಂಸ್ಥಾಪಕಿ ಕವಿತಾರಾವ್, ಸಂಘಟಕ ಕುಂಬಾಪುರ ಬಾಬು, ಗ್ರಾಮ ಪಂಚಾಯಿತಿ ಸದಸ್ಯ ಎಚ್.ಸಿ. ರಾಮಣ್ಣ, ಮುಖಂಡ ಗೋಪಿ, ಪಿ. ಪುನೀತ್ ರಾಜ್, ನಟಿ ಎನ್. ಸುಗುಣ, ರಾವಣಾಸುರ ಯುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟಿನ ಪದಾಧಿಕಾರಿಗಳು ಇದ್ದರು.