ರಾಜ್ಯದಲ್ಲಿ ಬಗೆಹರಿಸದ ನೂರಾರು ಸಮಸ್ಯೆಗಳಿವೆ : ಆದರೆ ಬೇಡವಾದ ವಿಷಯಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ : ಎಚ್.ಡಿ. ಕುಮಾರಸ್ವಾಮಿ ಬೇಸರ
ರಾಮನಗರ : ಹಲಾಲ್ ವಿಚಾರವಾಗಿ ವಿಧಾನಸಭೆಯಲ್ಲಿ ಚರ್ಚೆಗೆ ಬಂದಿಲ್ಲ, ಬಂದರೆ ಚರ್ಚೆ ಮಾಡಬಹುದು. ಇವತ್ತು ಚುನಾವಣಾ ಸುಧಾರಣಾ ಬಗ್ಗೆ ಚರ್ಚೆ ಇದೆ. ಅಲ್ಲಿ ಅವಕಾಶ ಸಿಕ್ಕರೆ ಸಮಾಜದಲ್ಲಿ ಶಾಂತಿ ತರುವ ವಿಚಾರವಾಗಿ ಸಲಹೆ ಕೊಡ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮತ್ತು ಪುರೋಹಿತ ರಾಜ್ಯ ಸಭೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಬಗೆ ಹರಿಸದ ನೂರಾರು ಸಮಸ್ಯೆಗಳಿವೆ ಅದನ್ನು ಬಿಟ್ಟು ಬೇಡವಾದ ವಿಷಯಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆಂದು ಕುಮಾರಸ್ವಾಮಿ ತಿಳಿಸಿದರು.
ಇನ್ನು ರಾಜ್ಯಕ್ಕೆ ಅಮಿತ್ ಷಾ – ರಾಹುಲ್ ಗಾಂಧಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಚುನಾವಣಾ ವರ್ಷ ಪ್ರಾರಂಭ ಆಗಿದ್ದು, ರಾಷ್ಟ್ರೀಯ ಪಕ್ಷಗಳ ನಾಯಕರು ಲಗ್ಗೆಯಿಟ್ಟು ಮತ ಪಡೆಯಲು ಪ್ರಾರಂಭ ಮಾಡ್ತಾರೆ. ಮೊದಲು ನಮ್ಮ ರಾಜ್ಯದ ನದಿ ನೀರಿನ ಸಮಸ್ಯೆ ಬಗೆಹರಿಸಿಕೊಂಡು ಬಂದು ಮತ ಕೇಳಲಿ. ನೀರಿನ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಪಕ್ಷಗಳ ನಾಯಕರು ಕೆಲಸ ಮಾಡಬೇಕಿದೆ.
ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಮಾಡಿರುವ ಅನ್ಯಾಯದ ಬಗ್ಗೆ ನನ್ನ ಹೋರಾಟ ಇದ್ದು, ಮುಂದಿನ 10 ನೇ ತಾರೀಖಿನಿಂದ ನಮ್ಮ ಸಂಘಟನೆ ಪ್ರಾರಂಭ ಆಗಲಿದೆ ಎಂದರು. ಹೆಚ್ಚು ಪ್ರಚಾರ ಮಾಡಿ ಹೇಳುವ ಬದಲು, ನಿಮಗೆ ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಹೋರಾಟ ತಿಳಿಯಲಿದೆ ಎಂದರು.
ಅವದಿ ಪೂರ್ವ ಚುನಾವಣೆ ಆಗಬಹುದು :
ಅವದಿಗೂ ಮುನ್ನವೇ ರಾಜ್ಯದಲ್ಲಿ ಚುನಾವಣೆ ಬಂದರು ಅಚ್ಚರಿ ಇಲ್ಲ. ಗುಜರಾತ್ ಜೊತೆಗೆ ಕರ್ನಾಟಕದಲ್ಲಿಯೂ ಚುನಾವಣೆ ನಡೆದ್ರು ನಡೆಯಬಹುದು. ಇಲ್ಲ ಮುಂದಿನ ಏಪ್ರಿಲ್ ನಲ್ಲಿಯೂ ನಡೆಯಬಹುದು, ಯಾವಾಗ ನಡೆದ್ರು ಕೂಡ ನಾವು ಸಿದ್ಧರಿದ್ದೇವೆ. ನಾವು ಅಕ್ರಮ ಮಾಡದೇ, ಅಕ್ರಮವಾಗಿ ಆಸ್ತಿ ಸಂಪಾದಿಸದೇ ಇದ್ದಾಗ ನಾವೇಕೆ ನೋಟೀಸ್ ಗೆ ತಲೆಕೆಡಿಸಿಕೊಳ್ಳಬೇಕು. ಇಡಿ ಮತ್ತು ಸಿಬಿಐ ಬಿಜೆಪಿಯ ಅಂಗ ಪಕ್ಷಗಳು. ಅವುಗಳಿಂದ ನಮಗೆ, ನಮ್ಮ ಕುಟುಂಬಕ್ಕೆ ಏನು ಮಾಡಲು ಸಾಧ್ಯವಿಲ್ಲ ಎಂದು ಇದೇ ವೇಳೆ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಅರ್ಚಕರ ಸಂಘದ ವಿಶೇಷ ಪೂಜಾ ಪೂಜೆ ಹಾಗೂ ಹೋಮ :
ಇದೇ ಸಂದರ್ಭದಲ್ಲಿ ರಾಮನಗರದಲ್ಲಿ ಅರ್ಚಕರ ಸಂಘದ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜಾ ಕಾರ್ಯ ಹಾಗೂ ಹೋಮ ನಡೆಸಲಾಯಿತು. ಸುಮಾರು 1000ಕ್ಕೂ ಹೆಚ್ಚಿನ ಅರ್ಚಕರು ಭಾಗವಹಿಸಿದ್ದು, ರಾಜ್ಯದ ಎಲ್ಲಾ ಜಿಲ್ಲೆಯಿಂದ ಅರ್ಚಕರು ಬಂದಿದ್ದಾರೆ.

ಈ ಪೂಜಾ ಫಲ ನಾಡಿನ ಜನರಲ್ಲಿ ಸುಖ ಶಾಂತಿ ಸಮೃದ್ಧಿ ತರಲಿ. ನಮ್ಮ ಜನ ನೆಮ್ಮದಿಯಿಂದ ಬದುಕುವ ವಾತಾವರಣ ನೀಡಲೆಂದು ಅರ್ಚಕರ ಸಂಘದ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಮಾಜಿ ಸಿಎಂ ಹೆಚ್ಡಿಕೆ ಇದೇ ವೇಳೆ ಪ್ರಾರ್ಥಿಸಿದರು.