ಅರ್ಕಾವತಿ, ಹ್ಯೂಬ್ಲೆಟ್ ವಾಚ್ ಪ್ರಕರಣದ ಆರೋಪಿ ಮುಖ್ಯಮಂತ್ರಿ ಅಭ್ಯರ್ಥಿ! ; ತಿಹಾರ್‌ ಜೈಲಿಂದ ಬಂದವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ : ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಆಕ್ರೋಶ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ಸಿ.ಎನ್ ಅಶ್ವತ್ಥ ನಾರಾಯಣ ಹರಿಹಾಯ್ದಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಿಎನ್ ಅಶ್ವತ್ಥ ನಾರಾಯಣ, ತಿಹಾರ್‌ ಜೈಲಲ್ಲಿ 50 ದಿನ ಉಳಿದು ಬಂದವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ, ಅರ್ಕಾವತಿ, ಹ್ಯೂಬ್ಲೆಟ್ ವಾಚ್ ಪ್ರಕರಣದ ಆರೋಪಿ ಸಿಎಂ ಕ್ಯಾಂಡಿಡೇಟ್‌! 2013-18ರ ಅವಧಿಯಲ್ಲಿ ಹಲವಾರು ‘ಅಕ್ರಮ ಭಾಗ್ಯ’ ನೀಡಿ ಈಗ ತಮ್ಮ ತಪ್ಪನ್ನು ಮರೆಮಾಚಲು ಶೇ. 40 ರಷ್ಟು ಕಮಿಷನ್ ಎಂಬ ಟೂಲ್‌ ಕಿಟ್‌ ಪಾಲಿಟಿಕ್ಸ್‌ಗೆ ‘ಕೈ’ ಹಾಕಿದೆ.

7 ದಶಕಗಳಿಂದ ಭ್ರಷ್ಟಾಚಾರವೆಂಬ ಕಾಮಾಲೆಯಿಂದ ಬಳಲುತ್ತಿರುವ ಕೈ ನಾಯಕರಿಗೆ ಎಲ್ಲರೂ ತಮ್ಮಂತೆಯೇ ಕಾಣುತ್ತಿದ್ದಾರೆ! 2013-18ರ ಅವಧಿಯಲ್ಲಿ ರಾಜ್ಯವನ್ನು ಕೈ ಹೈಕಮಾಂಡ್‌ನ ಎಟಿಎಂನಂತೆ ಬಳಸಿಕೊಂಡು ಈಗ ಟೂಲ್‌ಕಿಟ್‌ ಬಳಸಿ ಹುರುಳಿಲ್ಲದ ಆರೋಪ ಮಾಡುತ್ತಾ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದೆ.

ತಾವು ಅಕ್ರಮ ಚಟುವಟಿಕೆ ನಡೆಸಿ ಇಂದು ಅಧಿಕಾರಕ್ಕೇರಲು ಕಾಂಗ್ರೆಸ್‌ ಬಳಸುತ್ತಿರುವ ಅಸ್ತ್ರವೇ ಟೂಲ್‌ಕಿಟ್‌, ಈವೆಂಟ್‌ ಮ್ಯಾನೇಜ್‌ಮೆಂಟ್‌! ಸಾಕ್ಷ್ಯಾಧಾರಗಳಿಲ್ಲದೇ ಗಾಳಿಯಲ್ಲಿ ಗುಂಡು ಹಾರಿಸುವುದು, ಸುಳ್ಳು ಹಬ್ಬಿಸುವುದವರ ತಂತ್ರ-ಕುತಂತ್ರದ ಮೊದಲ ಹೆಜ್ಜೆ ಎಂದು ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *