ಆದಿವಾಸಿ ಮಹಿಳೆಯನ್ನು ಅರೆನಗ್ನಗೊಳಿಸಿ ಹಲ್ಲೆ : ಬಿಜೆಪಿ ಮುಖಂಡನ ಬಂಧನ

ಮಂಗಳೂರು : ಜಾಗದ ತಕರಾರಿನ ವಿಚಾರದಲ್ಲಿ ಆದಿವಾಸಿ ಮಹಿಳೆಯನ್ನು ಅರೆಬೆತ್ತಲೆ ಗೊಳಿಸಿ ಹಲ್ಲೆ ನಡೆಸಿದ ಬಿಜೆಪಿ ಮುಖಂಡ ಸೇರಿದಂತೆ 9 ಮಂದಿ ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರಿಪಳ್ಳ ಎಂಬಲ್ಲಿ ಘಟನೆ ನಡೆದಿದೆ. ನೆರೆಹೊರೆಯ ಮನೆಯವರ ಜಾಗದ ತಕರಾರಿನ ಹಿನ್ನಲೆಯಲ್ಲಿ ತಂಡದಿಂದ ಮಹಿಳೆಯರ ಬಟ್ಟೆ ಹರಿದು ಅರೆನಗ್ನಗೊಳಿಸಿ ಹಲ್ಲೆ ಮಾಡಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣಾ ಪೊಲೀಸರು ಬಿಜೆಪಿ ಎಸ್‌ಟಿ ಮೋರ್ಚಾದ ಅಧ್ಯಕ್ಷ ಸೇರಿದಂತೆ 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಸಂದೀಪ್, ಸಂತೋಷ್, ಗುಲಾಬಿ, ಕುಸುಮ, ಸುಗುಣ, ಲೋಕಯ್ಯ, ಅನಿಲ್, ಲಲಿತ, ಚೆನ್ನಕೇಶವ ಎಂಬವರ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಆರೋಪಿಗಳ ವಿರುದ್ಧ ಐಪಿಸಿ 143, 147, 148, 323, 324, 504, 354, 354(B), 506, 149 ಅಡಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಮಹಿಳೆಯ ಕುಟುಂಬಸ್ಥರು ಸಲ್ಲಿಸಿದ್ದ 94ಸಿ ಅರ್ಜಿಯ ಅಳತೆಗೆಂದು ಅಧಿಕಾರಿಗಳು ಬಂದಿದ್ದರು.

ಇದನ್ನೂ ಓದಿ :

ಆದಿವಾಸಿ ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ವಿಡಿಯೊ ಚಿತ್ರೀಕರಣ : ಉಜಿರೆ ಬಳಿ ಅಮಾನವೀಯ ಕೃತ್ಯ : ದೂರು ದಾಖಲು – ಹಾಯ್ ರಾಮನಗರ –

https://go.shr.lc/3k4M8E7

ಈ ಸಂದರ್ಭ ಜಾಗದ ಬಗ್ಗೆ ಇನ್ನೊಂದು ತಂಡ ತಕರಾರು ತೆಗೆದಿದೆ. ಇದರಿಂದಾಗಿ ಅಳತೆಗೆ ಬಂದ ಅಧಿಕಾರಿಗಳು ಸಾಧ್ಯವಿಲ್ಲ ಎಂದು ಬಿಟ್ಟು ಹೋಗಿದ್ದಾರೆ. ಅಧಿಕಾರಿಗಳು ತೆರಳಿದ ಬಳಿಕ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆಗ ಬಗ್ಗೆ ಮಾಧ್ಯಮಗಳಿಗೆ ಸಂತ್ರಸ್ತ ಮಹಿಳೆಯ ಸಹೋದರಿ ಸುರೇಖಾ ಮಾಹಿತಿ ನೀಡಿದ್ದು, “94ಸಿ ಜಾಗಕ್ಕಾಗಿ ಅರ್ಜಿ ಸಲ್ಲಿಸಿದ್ದೆವು. ಆದರೆ ಆ ಜಾಗಕ್ಕೆ ನೆರೆಹೊರೆಯವರ ಭಾರೀ ತಕರಾರು ಇತ್ತು. ಪಿಡಿಒ, ವಿಎ ಅಧಿಕಾರಿಗಳು ಜಾಗದ ಪರಿಶೀಲನೆಗೆ ಬಂದಿದ್ದರು. ಆದರೆ ಅಲ್ಲಿ ಮಾತಿಗೆ ಮಾತು ಬೆಳೆದಿದ್ದರಿಂದ ಪಿಡಿಒ ಮತ್ತು ಗ್ರಾಮ ಕರಣಿಕ ಅಧಿಕಾರಿಗಳು ಸ್ಥಳದಿಂದ ತೆರಳಿದ್ದರು” ಎಂದರು. “ಆ ಬಳಿಕ ಸ್ಥಳೀಯ ಮುಖಂಡನ ಸೂಚನೆಯಂತೇ ಮಹಿಳೆಯರು ನನ್ನ ಸಹೋದರಿ ಮೇಲೆ ಹಲ್ಲೆ ಮಾಡಿದ್ದಾರೆ. ಬಟ್ಟೆಗಳನ್ನು ಹರಿದು ದೌರ್ಜನ್ಯ ಎಸಗಿದ್ದಾರೆ. ಈಗ ಕೇಸ್ ಹಿಂಪಡೆಯಲು ಒತ್ತಾಯ ಮಾಡಿದ್ದಾರೆ. ನಮಗೆ ನ್ಯಾಯ ಸಿಗಬೇಕು” ಎಂದು ಆಗ್ರಹಿಸಿದರು. ಮಹಿಳೆಯರೂ ಇದ್ದ ತಂಡ ಮೊದಲು ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಅಕ್ಕನ ಮೇಲೆ ಹಲ್ಲೆ ನಡೆಸಿದ್ದು, ಇದನ್ನು ನೋಡಿ ಅಕ್ಕನ ರಕ್ಷಣೆಗೆ ತೆರಳಿದ ತಂಗಿಯ ಮೇಲೆ ಇವರು ಮುಗಿಬಿದ್ದು ಆಕೆಯ ಬಟ್ಟೆಗಳನ್ನು ಸಂಪೂರ್ಣವಾಗಿ ಹರಿದುಹಾಕಿದ್ದಾರೆ. ಅಲ್ಲದೇ ಅರೆಬೆತ್ತಲೆಯಾಗಿದ್ದ ಮಹಿಳೆಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸಂತ್ರಸ್ಥೆಯ ತಾಯಿಯ ಮೇಲೂ ಇವರು ಹಲ್ಲೆ ನಡೆಸಿದ್ದಾರೆ. ದುಷ್ಕರ್ಮಿಗಳ ತಂಡ ಅಲ್ಲಿಂದ ತೆರಳಿದ ಬಳಿಕವಷ್ಟೇ ಈ ಮಹಿಳೆಯರಿಗೆ ಮನೆಗೆ ಹೋಗಲು ಸಾಧ್ಯವಾಯಿತು ಎಂದು ಬೆಳ್ತಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *