ಬಿಡದಿ : ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ
ರಾಮನಗರ: ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಡದಿ ಪಟ್ಟಣದಲ್ಲಿ ಜೆಡಿಎಸ್ ಪಕ್ಷದಿಂದ ಆರಂಭವಾದ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕ ಎ.ಮಂಜುನಾಥ್ ಬುಧವಾರ ಚಾಲನೆ ನೀಡಿದರು.

ಬಿಜಿಎಸ್ ವೃತ್ತದಲ್ಲಿ ಬೈರವೈಕ್ಯ ಡಾ.ಭಾಲಗಂಗಧರನಾಥ ಸ್ವಾಮೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಎಚ್.ಡಿ.ಕೆ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಪಕ್ಷ ಸ್ವತಂತ್ರವಾಗಿ 5 ವರ್ಷಗಳ ಕಾಲ ಅಧಿಕಾರ ನಡೆಸಲು ಜನತೆ ಆಶೀರ್ವಾದ ಮಾಡಿದರೆ ರಾಜ್ಯದ ನದಿ ನೀರು ವ್ಯರ್ಥವಾಗದಂತೆ ನೀರಾವರಿ ಯೋಜನೆ ಅನುಷ್ಠಾನ ಮಾಡಲು ಪಣ ತೊಟ್ಟಿದ್ದೇನೆ ಎಂದರು.
ಈಗಾಗಲೇ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನನಗೆ ಶಕ್ತಿ ತುಂಬಿ ಅಧಿಕಾರ ನೀಡಿ, ಆ ಸಮಯದಲ್ಲಿ ನಾನು ನುಡಿದಂತೆ ನೀರಾವರಿ ಯೋಜನೆಗಳನ್ನು ಅನುಷ್ಟಾನ ಮಾಡದಿದ್ದರೆ ಜೆಡಿಎಸ್ ಪಕ್ಷವನ್ನು ವಿಸರ್ಜಿಸುವುದಾಗಿ ಈಗಾಗಲೇ ಘೋಷಣೆ ಮಾಡಿದ್ದು ಅದಕ್ಕೆ ನಾನು ಬದ್ದನಾಗಿರುತ್ತೇನೆ ಎಂದರು.

ರಾಜ್ಯ ಸರ್ಕಾರಕ್ಕೆ ಹಣದ ಕೊರತೆ ಏನು ಇಲ್ಲ. ಜನರು ನೀಡುವ ತೆರಿಗೆ ಹಣ ರಾಜ್ಯದಲ್ಲಿ ಕೈಗೊಳ್ಳುವ ಯೋಜನೆಗಳಿಗೆ ಸಾಕು.ಆದರೆ ಇಂದಿನ ಸರ್ಕಾರ ೪೦% ಕಮಿಷನ್ ಪಡೆದು ಜನರ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ದ ಗುಡುಗಿದರು.
ಶಾಸಕ ಎ.ಮಂಜುನಾಥ್ ಮಾತನಾಡಿ 2023ರಲ್ಲಿ ರಾಜ್ಯದಲ್ಲಿ ಸ್ವತಂತ್ರ ಸರ್ಕಾರ ತರುವ ನಿಟ್ಟಿನಲ್ಲಿ ಪಕ್ಷವನ್ನು ಸದೃಡಗೊಳಿಸಲು ರಾಜ್ಯಾಧ್ಯಂತ ಪಕ್ಷವನ್ನು ಸಂಘನೆ ಮಾಡಿ, ನದಿಗಳ ನೀರನ್ನು ಸಂಗ್ರಹಿಸುವ ಜನತಾ ಜಲಧಾರೆ ಕಾರ್ಯಕ್ರಮ ಜಿಲ್ಲೆಯಾದ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಜೆಡಿಎಸ್ ಸಂಘಟನೆ ಸದೃಡವಾಗಿದೆ ಎಂಬುದನ್ನು ಇಲ್ಲಿ ನೆರೆದಿರುವ ಮುಖಂಡರು ಮತ್ತು ಕಾರ್ಯಕರ್ತರು ಮತ್ತೊಮ್ಮೆ ಸಾಕ್ಣಿಕರಿಸಿದ್ದೀರಿ ನಿಮ್ಮೆಲ್ಲರಿಗೂ ಅಭಿನಂದಿಸುವುದಾಗಿ ಹೇಳಿದರು.

ಬಿಡದಿಯಿಂದ ಹೊರಟ ಜನತಾ ಜಲಧಾರೆ ರಥ ನೆಲ್ಲಿಗುಡ್ಡರ ಕೆರೆಯಲ್ಲಿ ಜಲ ಸಂಗ್ರಹಿಸಿ ಕರೇನಹಳ್ಳಿ, ಕಾಕರಾಮನಹಳ್ಳಿ, ಗಾಣಕಲ್ ಮೂಲಕ ಮಂಚನಬೆಲೆಯತ್ತ ಸಾಗಿತು. ಜನಪದ ಕಲಾ ತಂಡಗಳು,ಜೆಡಿಎಸ್ ಕಾರ್ಯಕರ್ತರು ನಡೆಸಿದ ಎರಡು ಕಿ.ಮೀ ಬೈಕ್ ರ್ಯಾಲಿ ವಿಶೇಷ ಆಕರ್ಷಣೆಯಾಗಿದ್ದವು.
ಎಲ್ಲಾ ಗ್ರಾಮಗಳಲ್ಲಿ ಮುಖಂಡರು ಜನತಾ ಜಲಧಾರೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಸ್ವಾಗತಿಸಿ, ಬೀಳ್ಕೊಟ್ಟರು.
ಮಾಗಡಿ ಪುರಸಭೆ ಅದ್ಯಕ್ಷೆ ವಿಜಯರೂಪೇಶ್, ಜೆಡಿಎಸ್ ಮುಖಂಡರಾದ ಚಂದ್ರಣ್ಣ, ಲಕ್ಣ್ಮಿಮಂಜುನಾಥ್,ಶೇಷಪ್ಪ, ಸುಮತಿನಾಗರಾಜು, ರವಿಕುಮಾರ್, ನರಸಿಂಹಯ್ಯ, ಸಿದ್ದರಾಜು, ಆನಂದ್,ಲಕ್ಷ್ಮಣ್, ನಾಗೇಶ್, ಲೋಹಿತ್ ಕುಮಾರ್, ದೇವರಾಜು, ಸೋಮಶೇಖರ್, ಸೋಮಣ್ಣ, ಗೋಪಾಲ್, ರಾಮಣ್ಣ, ರಮೇಶ್ ಕುಮಾರ್ ಪಾಲ್ಗೊಂಡಿದ್ದರು.

ವರದಿ : ಪಾದ್ರಳ್ಳಿ ರಾಜು ಮೊ: 6360 905 062