ಬಿಡದಿ ಪುರಸಭೆಯ ವ್ಯವಸ್ಥಾಪಕ ರಮೇಶ್ ಅವರಿಗೆ ಬೀಳ್ಕೊಡುಗೆ
ರಾಮನಗರ : ಸರ್ಕಾರಿ ಸೇವೆಯಿಂದ ನಿವೃತ್ತರಾದ ಬಿಡದಿ ಪುರಸಭೆಯ ವ್ಯವಸ್ಥಾಪಕ ರಮೇಶ್ ಅವರನ್ನು ಪುರಸಭೆ ಮುಖ್ಯಾಧಿಕಾರಿ ಅಮರ್ನಾಥ್ ಮತ್ತು ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಅಭಿನಂದಿಸಿ ಬೀಳ್ಕೊಟ್ಟರು.

ಬಿಡದಿ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ರಮೇಶ್ ಅವರು ಸರ್ಕಾರಿ ಸೇವೆಗೆ ಸೇರಿದ ನಂತರ ನಂಜನಗೂಡು, ಯಳಂದೂರು, ಮಾಗಡಿ, ಚನ್ನಪಟ್ಟಣ, ಹೇರೋಹಳ್ಳಿ ಸೇರಿದಂತೆ ಬಿಬಿಎಂಪಿಯಲ್ಲಿ ಸರ್ಕಾರಿ ಸೇವೆ ಸಲ್ಲಿಸಿದ್ದು, ಬಡವ, ಶ್ರೀಮಂತರೆನ್ನದೆ ಸಮಸ್ಯೆ ಒತ್ತು ಬಂದ ಎಲ್ಲರಿಗೂ ಕಾನೂನು ಪರಿಮಿತಿಯಲ್ಲಿ ಕೆಲಸ ಮಾಡುವ ಮೂಲಕ ಸರ್ಕಾರಿ ಸೇವೆ ಸಲ್ಲಿಸಿದ್ದೇನೆ ಎಂದರು.

ನನ್ನ ಸರ್ಕಾರಿ ಸೇವೆಯ ಅವಧಿಯಲ್ಲಿ ಸೇವಾ ಮನೋಭಾವವಿರಿಸಿಕೊಂಡು ಸಾರ್ವಜನಿಕರ ಸೇವಕನಾಗಿ ಕೆಲಸ ಮಾಡಿರುವ ತೃಪ್ತಿ ನನಗಿದೆ. ನಿವೃತ್ತಿಯ ಕೊನೆಯ ದಿನಗಳಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಬಿಡದಿ ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಆ ದಿನಗಳನ್ನು ಮರೆಯಲಾಗದು. ನಿವೃತ್ತಿಯ ಕೊನೆಯ ದಿನದಂದು ನನಗೆ ನೀವು ತೋರುತ್ತಿರುವ ಪ್ರೀತಿ ಸ್ಮರಣೀಯ ಎಂದು ಭಾವುಕರಾದರು. ಅಲ್ಲದೆ ಸರ್ಕಾರಿ ಸೇವೆಯ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲ ಹಿರಿಯ-ಕಿರಿಯ ಅಧಿಕಾರಿಗಳು, ಪುರಸಭಾ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬಿಡದಿ ಪುರಸಭಾ ಮುಖ್ಯಾಧಿಕಾರಿ ಅಮರ್ನಾಥ್, ರಾಜಸ್ವ ನಿರೀಕ್ಷಕ ಆನಂದ್, ಆರೋಗ್ಯ ನಿರೀಕ್ಷಕಿ ರೂಪಾ, ಕಂದಾಯ ಅಧಿಕಾರಿ ನಾಗರಾಜು ಮಾತನಾಡಿ ರಮೇಶ್ ಅವರು ಎಲ್ಲರೊಂದಿಗೆ ವಿಶ್ವಾಸದಿಂದ ಕೆಲಸ ಮಾಡುತ್ತಾ ಲವಲವಿಕೆಯಿಂದ ಇರುತ್ತಿದ್ದರು. ಕಚೇರಿಯಲ್ಲಿ ಅವರು ನೀಡುತ್ತಿದ್ದ ಮಾರ್ಗದರ್ಶನಗಳು, ಸಲಹೆಗಳು ನಮಗೆ ಸ್ಪೂರ್ತಿಯಾಗಿದೆ ಎಂದು ಗುಣಗಾನ ಮಾಡಿದರು.
ಈ ವೇಳೆ ಆರೋಗ್ಯ ಶಾಖೆಯ ಇಇ ರಕ್ಷತ್ಗೌಡ, ಹಿರಿಯ ಆರೋಗ್ಯ ನಿರೀಕ್ಷಕಿ ವೈ.ಎಸ್.ಸಂದ್ಯಾ, ಪುರಸಭೆ ಅಧಿಕಾರಿಗಳಾದ ಶೃತಿ, ರವಿ, ಪುರುಷೋತ್ತಮ, ಮೂರ್ತಿ, ಪೌರ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಛಲಪತಿ ಸೇರಿದಂತೆ ಸಿಬ್ಬಂದಿಗಳಾದ ಅನಿತಾ, ಹೇಮಾ, ಮೂರ್ತಿ, ಅನಿಲ್ ಸೇರಿದಂತೆ ಪೌರಕಾರ್ಮಿಕ ವರ್ಗದವರು ಭಾಗವಹಿಸಿದ್ದರು.

ವರದಿ : ಪಾದ್ರಳ್ಳಿ ರಾಜು ಮೊ: 6360 905 062