ನಾಳೆ (ಜುಲೈ 26) ಉದ್ಗೇರಮ್ಮ ಕರಗ ಹಾಗೂ ಅಗ್ನಿಕೊಂಡ ಮಹೋತ್ಸವ
ರಾಮನಗರ : ತಾಲ್ಲೂಕಿನ ಹುಣಸನಹಳ್ಳಿ ರಸ್ತೆಯ ಸಿಡ್ಲಕಲ್ ಗ್ರಾಮದ ಉದ್ಗೇರಮ್ಮ ನವರ 23ನೇ ವರ್ಷದ ಕರಗ ಹಾಗೂ ಅಗ್ನಿಕೊಂಡ ಮಹೋತ್ಸವ ಜುಲೈ 26ರಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ.

ಪುರಾತನ ಕಾಲದಿಂದಲೂ ಉದ್ಗೇರಮ್ಮ ದೇವಾಲಯವಿದೆ. 22 ವರ್ಷಗಳಿಂದ ಕರಗ ಮತ್ತು ಅಗ್ನಿಕೊಂಡ ಮಹೋತ್ಸವವನ್ನು ಮಾಡಿಕೊಂಡು ಬರಲಾಗುತ್ತಿದೆ. ಜಗದೀಶ್ ಅವರು 23ನೇ ಬಾರಿಗೆ ಕರಗಧಾರಣೆ ಮಾಡಲಿದ್ದಾರೆ.
ಬೆಳಿಗ್ಗೆ 9 ಗಂಟಗೆ ದೇವಾಲಯದಿಂದ ಹೊರಡುವ ಕರಗವು ಹುಣಸನಹಳ್ಳಿ ಕಾಲೋನಿ, ಹುಣಸನಹಳ್ಳಿ, ಕೂನಗಲ್ಲು, ಕೃಷ್ಣಾಪುರದೊಡ್ಡಿ, ಅಚ್ಚಲುದೊಡ್ಡಿಯ ಮೂಲಕ ಬಂದು ಸಂಜೆ 6 ಗಂಟೆಯ ವೇಳೆಗೆ ಅಗ್ನಿಕೊಂಡವನ್ನು ಪ್ರವೇಶಿಸಲಿದೆ.
ಈ ಭಾಗದಲ್ಲಿ ವ್ಯವಸಾಯ ಮಾಡುವ ಮೊದಲು ನಮ್ಮ ಮನೆತನದ ಹಿರಿಯರು ಉದ್ಗೇರಮ್ಮನಿಗೆ ಪೂಜೆ ಸಲ್ಲಿಸಿ ಪ್ರಾರಂಭಿಸುತ್ತಿದ್ದರು. ಬೆಂಗಳೂರು, ರಾಮನಗರದ ಟ್ರೂಪ್ಲೆನ್, ಬಾಲಗೇರಿ ಸೇರಿದಂತೆ ಕೈಲಾಂಚ ಹೋಬಳಿಯ ಹುಣಸನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಜನರು ಈ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕರಗಧಾರಕ ಜಗದೀಶ್ ತಿಳಿಸಿದರು.

ಮೊದಲು ಸಣ್ಣ ಪ್ರಮಾಣದಲ್ಲಿ ಪೂಜೆಪುನಸ್ಕಾರಗಳು ನಡೆಯುತ್ತಿದ್ದವು. ಈ ದೇವತೆಯ ಭಕ್ತಾದಿಗಳು ಈಗ ಹೆಚ್ಚಾಗುತ್ತಿದ್ದಾರೆ. ಇಲ್ಲಿನ ರೈತ ಸಮುದಾಯ ನಿರಂತರವಾಗಿ ಉದ್ಗೇರಮ್ಮನನ್ನು ಪೂಜಿಸಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.
ನಮ್ಮ ತಾತನ ಕಾಲದಿಂದಲೂ ಉದ್ಗೇರಮ್ಮನನ್ನು ಪೂಜೆ ಮಾಡಿಕೊಂಡು ಬರುತ್ತಿದ್ದೇವೆ. ಈ ದೇವತೆಯ ಕರಗವು ಹಗಲು ಹೊತ್ತಿನಲ್ಲಿ ನಡೆಯುತ್ತದೆ. ಉದ್ಗೇರಮ್ಮನನ್ನು ಪೂಜಿಸಿಕೊಂಡು ಕೃಷಿ ಕೆಲಸವನ್ನು ಮಾಡಿದರೆ ನಷ್ಟವಾಗುವುದಿಲ್ಲ ಎಂಬುದು ನಂಬಿಕೆಯಾಗಿದೆ ಎಂದು ತಿಳಿಸಿದರು.
ಹತ್ತನೇ ಕರಗ :
ಜುಲೈ 12 ರಂದು ಬಂಡಿಮಹಾಂಕಾಳಿ ಕರಗ, ಜುಲೈ 19ರಂದು ಚಾಮುಂಡೇಶ್ವರಿ, ಐಜೂರು ಆದಿಶಕ್ತ, ಬಿಸಿಲು ಮಾರಮ್ಮ, ಮಗ್ಗದ ಕೇರಿ ಮಾರಮ್ಮ, ಭಂಡಾರಮ್ಮ ದೇವಿ, ಮುತ್ತುಮಾರಮ್ಮ, ಶೆಟ್ಟಿಹಳ್ಳಿ ಆದಿಶಕ್ತಿ, ಕೊಂಕಾಣಿದೊಡ್ಡಿ ಆದಿಶಕ್ತಿ ಕರಗ ಉತ್ಸವ ನಡೆಯಿತು. ಈಗ ನಡೆಯುತ್ತಿರುವ ಉದ್ಗೇರಮ್ಮ ಕರಗವು ಹತ್ತನೆಯ ಕರಗವಾಗಿದೆ.