ಬೋಳಪ್ಪನ ಕೆರೆ ಬಿರುಕು : ಸಾರ್ವಜನಿಕರು ಹಾಗೂ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ
ರಾಮನಗರ : ನಗರದ ಹೊರ ವಲಯದಲ್ಲಿ ಇರುವ ಬೋಳಪ್ಪನ ಕೆರೆಯಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದ್ದು, ಸಾರ್ವಜನಿಕರು ಹಾಗೂ ಅಧಿಕಾರಿಗಳ ಸಮಯ ಪ್ರಜ್ಞೆಯಿಂದಾಗಿ ದುರಂತ ತಪ್ಪಿದೆ.
ಕೆರೆ ಏರಿಯಲ್ಲಿ ಬಿರುಕು ಪತ್ತೆಯಾಗುತ್ತಲೇ ತಾಲ್ಲೂಕು ಆಡಳಿತ ಎಚ್ಚೆತ್ತಿದ್ದು, ತ್ವರಿತವಾಗಿ ಕಾರ್ಯಾಚರಣೆ ನಡೆಸಿತು. ಜೆಸಿಬಿ ಯಂತ್ರವನ್ನು ಬಳಸಿ ಕೆರೆ ಕೋಡಿ ಪ್ರದೇಶವನ್ನು ವಿಸ್ತರಿಸಿ, ಹೆಚ್ಚಿನ ನೀರು ಹೊರ ಹೋಗಲು ಅನುವು ಮಾಡಿಕೊಡಲಾಯಿತು. ತಹಶೀಲ್ದಾರ್, ಡಿವೈಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು, ಕೆರೆಯ ಏರಿ ದುರಸ್ತಿಯ ಪ್ರಯತ್ನ ನಡೆಸಿದರು.
ರಾಮನಗರದ ಪ್ರಮುಖ ಕೆರೆಗಳಲ್ಲಿ ಬೋಳಪ್ಪನ ಕೆರೆ ಒಂದಾಗಿದೆ. ಇಪ್ಪತ್ತು ವರ್ಷಗಳ ನಂತರ ಕೆರೆ ಕೋಡಿ ಬಿದ್ದಿದೆ. ಆದರೆ ಕೆರೆ ಏರಿಯ ಮಧ್ಯದಲ್ಲೇ ದೊಡ್ಡ ಸೀಳು ಕಾಣಿಸಿಕೊಂಡಿದೆ. ನೀರಿನ ಸಂಗ್ರಹ ಇನ್ನಷ್ಟು ಹೆಚ್ಚಾದಲ್ಲಿ ಕೆರೆ ಒಡೆಯುವ ಸಾಧ್ಯತೆ ಇತ್ತು. ಹಾಗೇನಾದರೂ ಆಗಿದ್ದಲ್ಲಿ ನಗರದ ಹೃದಯ ಭಾಗ ಕೆರೆ ನೀರಿನಿಂದ ಮುಳುಗಡೆ ಆಗುವ ಭೀತಿ ಎದುರಾಗಿತ್ತು. ಸದ್ಯಕ್ಕೆ ದುರಂತ ತಪ್ಪಿದೆ.