ಡಾ.ಪಿ. ನಂಜುಂಡ ಅವರ “ಕಾದಂಬರಿ ಕನ್ನಡಿಯಲ್ಲಿ ಕಾರಂತ ಮತ್ತು ತಕಳಿ” ಪುಸ್ತಕ ಬಿಡುಗಡೆ
ಮಾಗಡಿ : ಸಾಹಿತಿ ಡಾ.ಪಿ. ನಂಜುಂಡ ಅವರು ಪದ್ಮಶ್ರೀ ನಾಡೋಜ ಡಾ. ಸಿದ್ದಲಿಂಗಯ್ಯ ಅವರ ಮಾರ್ಗದರ್ಶನದಲ್ಲಿ ಮೂಡಿಬಂದ ಸಂಶೋಧನಾ ಮಹಾಪ್ರಬಂಧ “ಕಾದಂಬರಿ ಕನ್ನಡಿಯಲ್ಲಿ ಕಾರಂತ ಮತ್ತು ತಕಳಿ” ಕಾಡು-ಕಡಲಿನ ಮಹಾಸಂಗಮ ಕೃತಿಯನ್ನು ಬಿಡುಗಡೆಯಾಯಿತು.
ಪ್ರಾಂಶುಪಾಲ ಕಾಂತರಾಜ್ ಕೃತಿ ಬಿಡುಗಡೆ ಮಾಡಿ ಮಾತನಾಡಿ, ಕನ್ನಡಿಗರು ಕನ್ನಡ ಕೃತಿಗಳನ್ನು ಖರೀದಿಸಿ ಓದಬೇಕು. ನಾಡೋಜ ಡಾ.ಸಿದ್ದಲಿಂಗಯ್ಯ ಹೋರಾಟದ ಬಗ್ಗೆ ಯುವ ಜನತೆಗೆ ತಿಳಿಸುವ ಅಗತ್ಯವಿದೆ ಎಂದರು.
ಕವಿ ಸಿದ್ದಲಿಂಗಯ್ಯ ಅವರ ಮಾರ್ಗದರ್ಶನದಲ್ಲಿ ಇಬ್ಬರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕಾದಂಬರಿಗಳ ತೌಲನಿಕ ಅಧ್ಯಯನ ನಡೆಸಿ ಪುಸ್ತಕ ಹೊರ ತರುವ ಕೆಲಸ ಮಾಡಿದ್ದೇನೆ ಎಂದು ಸಾಹಿತಿ ಡಾ.ಪಿ. ನಂಜುಂಡ ಹೇಳಿದರು.
ಡಾ. ಸಿದ್ದಲಿಂಗಯ್ಯ ಇಂದು ನಮ್ಮ ಜೊತೆಯಲ್ಲಿಲ್ಲ. ಆದರೆ ಅವರು ನಮಗೆ ಮಾಡಿದ ಮಾರ್ಗದರ್ಶನ ಹಾಗೂ ಅವರಿಗೆ ಮಾಗಡಿ ತಾಲ್ಲೂಕಿನ ಮೇಲಿದ್ದ ಪ್ರೀತಿಗೆ ಬೆಲೆ ಕಟ್ಟಲಾಗದು. ಶಿವರಾಮ ಕಾರಂತರ ಚೋಮನ ದುಡಿ ಹಾಗೂ ಮಲಯಾಳಿ ಕವಿ ತಕಳಿ ಶಿವಶಂಕರ್ ಪಿಳ್ಳೆ ಅವರ ತೋಟಿ ಮಗ ಮತ್ತು ಕವಿ ಸಿದ್ದಲಿಂಗಯ್ಯ ಅವರ ಚೋಮನ ಮಕ್ಕಳು ಎಂಬ ಕವಿತೆಯಲ್ಲಿ ಮೂಡಿರುವ ನೊಂದವರ ಹಾಗೂ ಸಮಾನತೆಯ ಹಾದಿಗೆ ದಾರಿತೋರುವ ಸಾಕಷ್ಟು ಅಂಶಗಳನ್ನು ಪುಸ್ತಕದಲ್ಲಿ ರಚಿಸಿರುವುದಾಗಿ ತಿಳಿಸಿದರು.
ಶಿಕ್ಷಕರಾದ ರಮೇಶ್, ಸೌಮ್ಯ, ತಾಯಣ್ಣ, ವರ್ತಕ ಎಸ್.ಸುನಿಲ್, ತಾಲ್ಲೂಕು ಕ.ಸಾ.ಪ ಅಧ್ಯಕ್ಷ ತಿ.ನಾ ಪದ್ಮನಾಭ ಮಾತನಾಡಿದರು. ಉಪಪ್ರಾಂಶುಪಾಲೆ ಮಂಜುಳಾ, ಉಪನ್ಯಾಸಕ ಬೆಟ್ಟಸ್ವಾಮಿ, ಕೆರೆಬೀದಿ ಬಸವರಾಜ ಇತರರು ಉಪಸ್ಥಿತರಿದ್ದರು.