ರಾಜ ಮನೆತನಗಳು ಮತ್ತು ಸಾಮ್ರಾಜ್ಯ ಕುಸಿದು ಪತನ ಹೊಂದಿದ ಸಂದರ್ಭದಲ್ಲಿ ಸಿದ್ದಿ ಜನರನ್ನು ಮೂಲೆಗುಂಪು ಮಾಡಲಾಯಿತು : ಡಾ.ಹಿ.ಶಿ. ರಾಮಚಂದ್ರೇಗೌಡ
ರಾಮನಗರ : ಸಿದ್ದಿ ಜನರು ತುಂಬಾ ಬಲಿಷ್ಠರು ಎಂದು ಅವರನ್ನು ನಮ್ಮ ದೇಶಕ್ಕೆ ಬರಮಾಡಿಕೊಳ್ಳಲಾಯಿತು. ಹೈದರಾಬಾದ್ನಲ್ಲಿ ಉಳಿಸಲಾಯಿತು. ಸಿದ್ದಿ ಜನಾಂಗ ಪ್ರಬಲವಾದ ಸೈನಿಕ ದಳವಾಗಿದ್ದರು ಎಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಡಾ.ಹಿ.ಶಿ. ರಾಮಚಂದ್ರೇಗೌಡ ತಿಳಿಸಿದರು.

ನಗರದ ಜಾನಪದ ಲೋಕದ ಆವರಣದಲ್ಲಿ ನಡೆದ ತಿಂಗಳ ಅತಿಥಿ ಸಂವಾದ ಕಾರ್ಯಕ್ರಮದಲ್ಲಿ ಗುಮಟೆ ಕಲಾವಿದೆ ಬೊಡ್ಡೆ ಹನುಮಂತ ಸಿದ್ದಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಬೇರೆ ಬೇರೆ ರಾಜ ಮನೆತನಗಳು ಮತ್ತು ಸಾಮ್ರಾಜ್ಯ ಕುಸಿದು ಪತನ ಹೊಂದಿದ ಸಂದರ್ಭದಲ್ಲಿ ಇವರನ್ನು ಮೂಲೆಗುಂಪು ಮಾಡಲಾಯಿತು ಎಂದರು.
ಆ ಸಂದರ್ಭದಲ್ಲಿ ಇವರು ಕಾಡುಗಳಲ್ಲಿ ವಾಸಿಸಲು ಪ್ರಾರಂಭಿಸಿದರು. ಆದರೆ ಎಲ್ಲಾ ಸಮಾಜ ವಿಕಾಸವಾಗುತ್ತಿತ್ತು. ಆದರೆ ಸಿದ್ದಿ ಜನಾಂಗ ಮೂಲೆಗುಂಪಾಗಿ ಸೇರಿಕೊಂಡರು ಎಂದು ತಿಳಿಸಿದರು.
ಯಾರು ಪ್ರಜ್ಞಾವಂತರಾಗಿ ಮುನ್ನೆಲೆಯಲ್ಲಿ ಇರುತ್ತಾರೆಯೇ ಅಂತವರನ್ನು ತಂತ್ರಜ್ಞಾನ ಆಯ್ಕೆ ಮಾಡಿಕೊಳ್ಳುತ್ತದೆ. ತಂತ್ರಜ್ಞಾನದ ಜೊತೆ ಯಾರು ಒಡನಾಟ ಹೊಂದಿರುವುದಿಲ್ಲವೋ ಅವರು ಹಿಂದೆ ಸರಿಯುತ್ತಾರೆ ಎಂದು ತಿಳಿಸಿದರು.

ಸಮಾಜ ಯಾವಾಗಲೂ ವಿಕಾಸವಾಗುತ್ತಿರುತ್ತದೆ. ವಸ್ತುಗಳನ್ನು ಸೃಷ್ಟಿ ಮಾಡುವುದು ವಿಜ್ಞಾನಿ ಮತ್ತು ಬಂಡವಾಳಶಾಹಿಗಳು. ಆ ವಸ್ತುಗಳನ್ನು ಪಡೆಯಲು ಹೋರಾಟ ಮಾಡಬೇಕು. ಆದರೆ ಸಿದ್ದಿ ಜನಾಂಗ ಆ ಕೆಲಸವನ್ನು ಮಾಡಲಿಲ್ಲ ಎಂದು ತಿಳಿಸಿದರು.
ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಪ್ರತಿ ತಿಂಗಳು ನಾಡೋಜ ಎಚ್.ಎಲ್ ನಾಗೇಗೌಡರ ಹೆಸರಿನಲ್ಲಿ ಲೋಕಸಿರಿ ಗೌರವ ಕೊಡುತ್ತಿದೆ. ಕಲಾವಿದರ ಮನಸ್ಸಿನಲ್ಲಿ ಈ ನೆನಪು ಶಾಶ್ವತವಾಗಿ ಉಳಿಯಬೇಕು ಎಂಬ ಸಲುವಾಗಿ ಈ ಕಾರ್ಯಕ್ರಮ ಆರಂಭಿಸಲಾಯಿತು ಎಂದು ಅವರು ಹೇಳಿದರು.

ಜಾನಪದ ಲೋಕದ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ಬೆಂಗಳೂರು ವಿ.ವಿ. ರಾಮನಗರ ಸ್ನಾತಕೋತ್ತರ ಕೇಂದ್ರದ ನಿದೇರ್ಶಕ ಕೆ. ರಾಮಕೃಷ್ಣಯ್ಯ ಮಾತನಾಡಿದರು. ಜಾನಪದ ಲೋಕದ ಕ್ಯುರೇಟರ್ ಡಾ. ಯು.ಎಂ. ರವಿ, ಕಲಾವಿದೆ ಬೊಡ್ಡೆ ಹನುಮಂತ ಸಿದ್ದಿ ಅವರೊಂದಿಗೆ ಸಂವಾದ ನಡೆಸಿಕೊಟ್ಟರು. ರಂಗಸಹಾಯಕ ಎಸ್. ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಸು.ತ. ರಾಮೇಗೌಡ, ಕಾರ್ಯದರ್ಶಿ ವಸಂತ ಕುಮಾರ್, ಪದಾಧಿಕಾರಿಗಳಾದ ವಿಜಯ ರಾಂಪುರ, ಎಸ್. ರುದ್ರೇಶ್ವರ, ಜಾನಪದ ಲೋಕದ ಸಿಬ್ಬಂದಿ ಹಾಗೂ ರಾಮನಗರ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
“ಹಾಯ್ ರಾಮನಗರ” ಫೇಸ್ಬುಕ್ ಪುಟವನ್ನು ಫಾಲೋ ಮಾಡಿ :