ಮಾಗಡಿಯಲ್ಲಿ ಪ್ರಸಾದ್ ಗೌಡ, ರಾಮನಗರದಲ್ಲಿ ಗೌತಮ್ ಗೌಡ, ಚನ್ನಪಟ್ಟಣದಲ್ಲಿ ಯೋಗೇಶ್ವರ್, ಕನಕಪುರದಲ್ಲಿ ಅಶೋಕ್ ಬಿಜೆಪಿಯಿಂದ ಸ್ಪರ್ಧೆ

ಎಸ್. ರುದ್ರೇಶ್ವರ

ಹಾಯ್ ರಾಮನಗರ ಡಾಟ್ ಇನ್ ಸುದ್ದಿ.

ರಾಮನಗರ : ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ನಡೆದ ಲೆಕ್ಕಾಚಾರ ಹಾಗೂ  ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದೆ. ಆದರೆ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಆರ್. ಅಶೋಕ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಸ್ಪರ್ಧಿಸಲಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.

ಚನ್ನಪಟ್ಟಣದಿಂದ ಸಿ.ಪಿ. ಯೋಗೇಶ್ವರ್ :

ಚನ್ನಪಟ್ಟಣದಿಂದ ಬಿಜೆಪಿ ಅಭ್ಯರ್ಥಿ ಆಗಲಿರುವ ಸಿ.ಪಿ. ಯೋಗೇಶ್ವರ್‌ ಏಳನೇ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಯೋಗೇಶ್ವರ್‌ 2011ರ ಉಪ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು.

2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಚ್‌.ಡಿ. ಕುಮಾರಸ್ವಾಮಿ ಎದುರು ಪರಾಭವಗೊಂಡಿದ್ದರು. ಈ ಬಾರಿ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂದು ವದಂತಿ ಸಹ ಹಬ್ಬಿತ್ತು. ಅಂತಿಮವಾಗಿ ಕಮಲ ಚಿಹ್ನೆಯಿಂದಲೇ ಸಿಪಿವೈ ಸ್ಪರ್ಧೆ ಖಚಿತವಾಗಿದೆ. ಸ್ವಾಭಿಮಾನಿ ಸಂಕಲ್ಪ ನಡಿಗೆ ಯಾತ್ರೆ ಮೂಲಕ ಈಗಾಗಲೇ ಅವರು ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ.

 ಮಾಗಡಿಯಿಂದ ಕೆ.ಆರ್. ಪ್ರಸಾದ್ ಗೌಡ :

ಕಣಮಿಣಕಿ ಗ್ರಾಮದವರಾದ ಪ್ರಸಾದ್ ಗೌಡ ಈ ಬಾರಿ ಮಾಗಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಮಾಗಡಿ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದ ಪ್ರಸಾದ್‌ ಗೌಡ, ಚುನಾವಣೆ ಘೋಷಣೆಗೂ ಮುನ್ನ ಬಡಜನರಿಗೆ ಉಚಿತ ನಿವೇಶನ ಹಂಚಿಕೆ, ಮಹಿಳೆಯರಿಗೆ ಮೂಗುತಿ, ಧಾರ್ಮಿಕ ಪ್ರವಾಸಗಳ ಆಯೋಜನೆ ಮೊದಲಾದ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದರು.

ಪಕ್ಷದ ಟಿಕೆಟ್ ಖಾತ್ರಿಯಾಗುವ ಮುನ್ನವೇ ಕ್ಷೇತ್ರದಾದ್ಯಂತ ಪ್ರಚಾರ ನಡೆಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಆಪ್ತರಾಗಿದ್ದು, ಅದು ಸಹ ಅಭ್ಯರ್ಥಿ ಆಯ್ಕೆಯಲ್ಲಿ ಕೆಲಸ ಮಾಡಿದೆ. ಇವರು ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ರಾಮನಗರದಿಂದ ಗೌತಮ್ ಗೌಡ ಸ್ಪರ್ಧೆ :

ರಾಮನಗರ ವಿಧಾನಸಭಾ ಕ್ಷೇತ್ರದಿಂದ ನಿರೀಕ್ಷೆಯಂತೆ ಗೌತಮ್ ಗೌಡ ಅವರಿಗೆ ಅವಕಾಶ ಲಭಿಸಿದೆ. ರೇಷ್ಮೆ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಗೌತಮ್‌ ರಾಮನಗರದಲ್ಲಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣರ ಅಭಿನಂದನಾ ಸಮಾರಂಭದ ನೇತೃತ್ವ ವಹಿಸಿ ಗಮನ ಸೆಳೆದಿದ್ದರು. ಸಚಿವರನ್ನೂ ಒಳಗೊಂಡು ಹಿರಿಯರ ಆಶೀರ್ವಾದ ಬೇಡುತ್ತ ಪಕ್ಷದ ಟಿಕೆಟ್ ಗಿಟ್ಟಿಸುವ ತವಕದಲ್ಲಿ ಇದ್ದರು.

ಗೌತಮ್‌ ಗೌಡ ತಂದೆ ಮರಿಲಿಂಗೇಗೌಡ ಈ ಹಿಂದೆ ಜೆಡಿಎಸ್‌ನಿಂದ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆ ಆಗಿದ್ದರು. ಅವರು ಬಿಜೆಪಿ ಸೇರ್ಪಡೆಗೊಂಡ ಬಳಿಕ ಮಗನಿಗೆ ಟಿಕೆಟ್ ಬೇಡಿಕೆ ಇಟ್ಟಿದ್ದರು. ಗೌತಮ್‌ ಈಗಾಗಲೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಅನೇಕ ಬಾರಿ ಸ್ವಪಕ್ಷೀಯರ ವಿರೋಧವನ್ನೂ ಎದುರಿಸಿದ್ದರು. ಗೌತಮ್ ಗೌಡ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಕನಕಪುರದಿಂದ ಆರ್. ಅಶೋಕ್ :

ಸಚಿವ ಆರ್. ಅಶೋಕ್  ತಮ್ಮ ಸ್ವಕ್ಷೇತ್ರವಾದ ಪದ್ಮನಾಭ ನಗರದ ಜೊತೆ ಕನಕಪುರದಲ್ಲೂ ಅವರು ಸ್ಪರ್ಧಿಸುತ್ತಿದ್ದಾರೆ. ಆರ್. ಅಶೋಕ್ ಅವರ ಕನಕಪುರದಲ್ಲಿ ರಾಜಕೀಯ ಪ್ರಯೋಗಕ್ಕೆ ಬಿಜೆಪಿ ಮುಂದಾಗಿದೆ.

ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸಾಧನೆ ಹೇಳಿಕೊಳ್ಳುವಂತೆ ಇಲ್ಲ. ಪ್ರತಿ ಬಾರಿಯೂ ಇಲ್ಲಿ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತ ಬಂದಿದ್ದಾರೆ. 2018ರ ಚುನಾವಣೆಯಲ್ಲಿ ಇಲ್ಲಿ ನಂದಿನಿ ಗೌಡ ಕಣಕ್ಕೆ ಇಳಿದಿದ್ದರು. ಈ ಬಾರಿ ಅವರ ಜೊತೆಗೆ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಅಪ್ಪಾಜಿ ಗೌಡ ಸೇರಿದಂತೆ ಹಲವರ ಹೆಸರು ಕೇಳಿ ಬಂದಿತ್ತು.

2018ರ ವಿಧಾನಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ 6273 ಮತ ಗಳಿಸಲಷ್ಟೇ ಶಕ್ತರಾಗಿದ್ದರು. 2013ರಲ್ಲಿ ಇಲ್ಲಿ ಕಮಲ ಪಾಳಯದ ಅಭ್ಯರ್ಥಿ 1807 ಮತ ಪಡೆದು ಮುಖಭಂಗ ಅನುಭವಿಸಿದ್ದರು. ಸದ್ಯ ಕನಕಪುರದಲ್ಲಿರುವ ಕಾಂಗ್ರೆಸ್ ಅಲೆಯ ನಡುವೆ ಕಮಲ ಅರಳಿಸುವ ಭಾರಿ ಸವಾಲು ಅಶೋಕ್ ಅವರಿಗೆ ಎದುರಾಗಿದೆ.

ಡಿ.ಕೆ. ಶಿವಕುಮಾರ್ ಸೋಲಿಲ್ಲದ ಸರದಾರ :

ಕನಕಪುರದಲ್ಲಿ ಡಿ.ಕೆ. ಶಿವಕುಮಾರ್‌ ಸೋಲಿಲ್ಲದ ಸರದಾರನಾಗಿದ್ದು, ಸತತ ಏಳು ಬಾರಿ ಗೆಲುವು ದಾಖಲಿಸಿದ್ದಾರೆ. ಈ ಬಾರಿ ಕೂಡ ಇಲ್ಲಿ ಏಕಮುಖವಾದ ಚುನಾವಣೆ ನಡೆಯಲಿದೆ ಎಂಬ ನಿರೀಕ್ಷೆ ಇತ್ತು. ಇದೀಗ ಬಿಜೆಪಿ ತನ್ನಲ್ಲಿನ ಒಕ್ಕಲಿಗ ಸಮುದಾಯದ ಪ್ರಬಲ ನಾಯಕನನ್ನು ಕೆಪಿಸಿಸಿ ಅಧ್ಯಕ್ಷರ ಎದುರು ನಿಲ್ಲಿಸಿದ್ದು, ಈ ಮೂಲಕ ಅವರನ್ನು ತವರಿನಲ್ಲಿ ತಕ್ಕ ಮಟ್ಟಿಗೆ ಕಟ್ಟಿಹಾಕುವ ಪ್ರಯತ್ನ ಮಾಡುತ್ತಿದೆ.

ಕನಕಪುರದಲ್ಲಿ ಪಕ್ಷ ಸಂಘಟನೆ ಕಾಂಗ್ರೆಸ್‌–ಜೆಡಿಎಸ್‌ನಷ್ಟು ಪ್ರಬಲವಾಗಿಲ್ಲ. ಕನಕಪುರದಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡಬಲ್ಲ ನಾಯಕರ ಕೊರತೆ ಇತ್ತು. ಇದೀಗ ಉಳಿದಿರುವ ದಿನಗಳಲ್ಲಿ ಪಕ್ಷ ಸಂಘಟನೆ ಜೊತೆಗೆ ಚುನಾವಣೆಗೆ ಅಶೋಕ್ ಅವರು ಸಿದ್ದರಾಗಬೇಕಿದೆ.

ರಾಮನಗರ ಹಾಗೂ ಮಾಗಡಿ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ಟಿಕೆಟ್ ಆಕಾಂಕ್ಷಿಗಳಿಗೆ ನಿರಾಸೆ:

ರಾಮನಗರ ಹಾಗೂ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಅದರಲ್ಲೂ ಪ್ರಬಲ ಆಕಾಂಕ್ಷಿಗಳಾಗಿದ್ದ ಮಾಗಡಿಯ ರಂಗಧಾಮಯ್ಯ, ರಾಮನಗರದ ಡಿ. ನರೇಂದ್ರ, ಡಾ. ಪುಣ್ಯವತಿ ತೀವ್ರ ನಿರಾಸೆ ಅನುಭವಿಸುವಂತಾಗಿದೆ. ಅವರ ಪ್ರತಿಕ್ರಿಯೆ ಏನು ಎಂಬುದನ್ನು ಕಾದು ನೋಡಬೇಕಿದೆ.

ಸುದ್ದಿಗಳ ನೋಟಿಫಿಕೇಶನ್ ಗಾಗಿ ಬೆಲ್🔔 ಐಕಾನ್ ಕ್ಲಿಕ್ ಮಾಡಿ ಹಾಗೂ ವಾಟ್ಸಾಪ್ 🪀ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :

https://chat.whatsapp.com/IY8d8seeQSCIZewIP8uKdh

‘ಹಾಯ್ ರಾಮನಗರ’ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ :

https://www.facebook.com/HaiRamanagara?mibextid=ZbWKwL

ಟ್ವಿಟರ್ : http://twitter.com/hairamanagara

ಎಸ್. ರುದ್ರೇಶ್ವರ

ಸಹೃದಯ ಓದುಗರೆ, ಸಾಹಿತ್ಯ, ಕಲೆ, ಸಂಸ್ಕೃತಿ, ರಾಜಕೀಯ, ಸಾಮಾಜಿಕ, ವ್ಯಾಪಾರ ಹೀಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ರಾಮನಗರ ಜಿಲ್ಲೆ ಕರ್ನಾಟಕ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿರುವ ಜಿಲ್ಲೆಯಾಗಿದೆ. ರಾಮನಗರ ಜಿಲ್ಲೆಯಲ್ಲಿ ನಡೆಯುವ ಪ್ರಮುಖ ವಿಚಾರ, ಸಭೆ, ಸಮಾರಂಭ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳ ಮಾಹಿತಿ ಜತೆಗೆ ‘ರಾಮನಗರ ಜಿಲ್ಲೆ’ಯ ಇತಿಹಾಸವನ್ನು ‘ಹಾಯ್ ರಾಮನಗರ’ http://hairamanagara.in ಮೂಲಕ ತಿಳಿಸಲಾಗುವುದು. ಬ್ರೇಕಿಂಗ್ ವರದಿಗಳಿಗಾಗಿ ಆತುರ ಪಟ್ಟು ವರದಿಗಳನ್ನು ನೀಡುವುದಿಲ್ಲ. ವರದಿಗಳ ಖಚಿತತೆ ಲಭ್ಯವಾದ ನಂತರವಷ್ಟೆ ಪ್ರಕಟಿಸಲಾಗುತ್ತದೆ. ಸಮಾಜದಲ್ಲಿ ಏನಾಗುತ್ತಿದೆ ಎಂಬುದನ್ನು ಜನರು ಒಂದೇ ಕ್ಲಿಕ್ ಮೂಲಕ ತಿಳಿದು ಕೊಳ್ಳಬಹುದು. ವಸ್ತುನಿಷ್ಠ ವರದಿಗಳನ್ನು ನೀಡುವುದು ಮತ್ತು ಯಾವುದೇ ಪೂರ್ವಾಗ್ರಹವಿಲ್ಲದೆ ಮಾಹಿತಿ ನೀಡಲಿದ್ದೇವೆ. ಮಾಹಿತಿ, ಸಲಹೆಗಳಿಗೆ ಸದಾ ಸ್ವಾಗತ….. ರಾಮನಗರ ಜಿಲ್ಲೆಯ ಸುದ್ದಿಗಳಿಗಾಗಿ “ಹಾಯ್ ರಾಮನಗರ ಡಾಟ್ ಇನ್” ಓದುತ್ತಿರಿ. ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ – ಎಸ್. ರುದ್ರೇಶ್ವರ ಎಂ.ಎ., ಎಂ.ಫಿಲ್., ಬಿ.ಇಡಿ

Leave a Reply

Your email address will not be published. Required fields are marked *